ಬೆಂಗಳೂರು:ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರದಿಂದ ಸೇನೆಯನ್ನು ಹೊರಗಿಟ್ಟು, ದೇಶದ್ರೋಹದ ಕಾನೂನು ಜಾರಿಗೆ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಠೇವಣಿ ಸಿಗದಂತೆ ಮಾಡುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ಇಂದು ನಡೆದ ಬೃಹತ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ಸರ್ಕಾರದ ಅವಧಿಯಲ್ಲಿ ನಡೆಸಲಾದ ಸರ್ಜಿಕಲ್ ದಾಳಿ, ಬಾಹ್ಯಾಕಾಶದಲ್ಲಿ ಶಕ್ತಿ ಮಿಷನ್ ನಂತಹ ಯಶಸ್ವಿ ಕಾರ್ಯಾಚರಣೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಹೊಟ್ಟೆ ಉರಿ ಹೆಚ್ಚಾಗಿದೆ. ಹಿಂದೆ ರಷ್ಯಾ ಮಾತ್ರ ತಮ್ಮ ಜೊತೆಗೆ ಇರುತಿತ್ತು ಈಗ ಕಾಲ ಬದಲಾಗಿದ್ದು, ಇಡೀ ಜಗತ್ತೇ ನಮ್ಮ ಪರವಾಗಿದೆ ಇದನ್ನೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಕೇಂದ್ರದಲ್ಲಿ ಮಹಾಮಿಲಾವಟಿ ರಿಮೋಟ್ ಸರ್ಕಾರ ಇದ್ದಾಗ ಬೆಂಗಳೂರಿನಲ್ಲಿ ಸ್ಟೋಟ ಸಂಭವಿಸಿತ್ತು. ಉಗ್ರರ ದಾಳಿಯಿಂದಾಗಿ ದೇಶದ ಜನತೆ ಆತಂಕಗೊಂಡಿದ್ದರು. ಆದರೆ, ಐದು ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ಅಂತಹ ದಾಳಿ ನಡೆದಿದ್ಯಾ ಎಂದು ಪ್ರಶ್ನಿಸಿದರು. ಇದು ನಿಮ್ಮ ಮತದ ತಾಕತ್ತು ಆಗಿದೆ ಎಂದರು.
Advertisement