ಬಾಯಿಯೊಳಗೆ ಬಾಂಬ್

'ಬಾಯಿ ಬಿಟ್ಟರೆ ಬಣ್ಣ ಬಯಲು' ಎಂಬಂತೆ ಶೇ.80ರಷ್ಟು ಮಂದಿಯನ್ನು ಕಾಡುವ ಸಮಸ್ಯೆ...
ಬಾಯಿಯ ದುರ್ವಾಸನೆ (ಸಾಂದರ್ಭಿಕ ಚಿತ್ರ)
ಬಾಯಿಯ ದುರ್ವಾಸನೆ (ಸಾಂದರ್ಭಿಕ ಚಿತ್ರ)

ಬಾಯಿಯ ದುರ್ವಾಸನೆ ಇರುವವರು ಮುಜುಗರದಿಂದ ವೈದ್ಯರಿಂದ ಸಲಹೆ ಪಡೆಯಲು ಹಿಂಜರಿಯುತ್ತಾರೆ. ಮಾನಸಿಕ ಖಿನ್ನತೆಗೂ ಕಾರಣವಾಗಬಲ್ಲದು. ಈ ಸಮಸ್ಯೆಯಿಂದ ಮುಕ್ತವಾಗಿ ಮಾತನಾಡಲೂ ಹಿಂಜರಿಯುತ್ತಾರೆ. ಸುಖ ದಾಂಪತ್ಯಕ್ಕೂ ಮುಳ್ಳಾಗಿ ಆತ್ಮಹತ್ಯೆಗೂ ಪ್ರಚೋದಿಸಬಹುದು...

'ಬಾಯಿ ಬಿಟ್ಟರೆ ಬಣ್ಣ ಬಯಲು' ಎಂಬಂತೆ ಶೇ.80ರಷ್ಟು ಮಂದಿಯನ್ನು ಕಾಡುವ ಸಮಸ್ಯೆ ಬಾಯಿಯ ದುರ್ವಾಸನೆ. ಆದರದು ಅವರಿಗೇ ಗೊತ್ತೇ ಇರೊಲ್ಲ. ನಿರಂತರ, ಸ್ಥಿರವಾದ, ಅಸಹನೀಯ ಮತ್ತು ಅಸುಖಕರವಾದ ವಾಸನೆ ಬಾಯಿಯಿಂದ ಶ್ವಾಸೋಭ್ಯಾಸ ಮಾಡುವಾಗ ಹೊರಹೊಮ್ಮುತ್ತಿರುತ್ತದೆ. ಶೇ.85 ಜನರು ಬಾಯಿಯ ಶುಚಿತ್ವವನ್ನು ಸೂಕ್ತವಾಗಿ ಪಾಲಿಸದೇ ಇರುವುದರಿಂದ ಈ ಸಮಸ್ಯೆ ಕಾಡುತ್ತದೆ.

ಇನ್ನುಳಿದವರಲ್ಲಿ ಆಂತರಿಕ ಅಂಗಾಂಗಳ ಸಮಸ್ಯೆ ಮತ್ತು ಬಾಹ್ಯ ಕಾರಣಗಳಿಂದಲೂ ಆಗಿರಬಹುದು. ನಾವು ತಿಂದ ಬಳಿಕ ಬಾಯಿಯನ್ನು ಸ್ವಚ್ಛಗೊಳಿಸದಿದ್ದಲ್ಲಿ ಆಹಾರ ಪದಾರ್ಥಗಳ ಮೇಲೂ ಬ್ಯಾಕ್ಟೀರಿಯಾಗಳು ವಿಜೃಂಭಿಸಿ ಆವಿಯಾಗುವ ಗಂಧಕ ಮತ್ತು ಜಲಜನಕ ಸಲ್ಫೆಡ್ ಮುಂತಾದ ಅನಿಲಯುಕ್ತ ವಸ್ತುಗಳು ಉತ್ಪತ್ತಿಯಾಗಿ ಬಾಯಿಯ ವಾಸನೆಯನ್ನು ಹೆಚ್ಚಿಸುತ್ತದೆ. ಈ ರೀತಿಯ ಸೂಕ್ಷ್ಮಾಣುಗಳು ವಸಡಿ ನೆಡೆಗಳಲ್ಲೂ ಕಂಡುಬರಬಹುದು.

ಜೊಲ್ಲುರಸ ಕಡಿಮೆಯಾಗುವುದು (ಜೊಲ್ಲುರಸ ಗ್ರಂಥಿಗಳ ರೋಗದಿಂದ), ಜೊಲ್ಲುರಸ ಸಾವಕಾಶವಾಗಿ ಸ್ರವಿಸದಿದ್ದರೆ ಸೂಕ್ಷ್ಮಾಣುಗಳು ವಸಡಿನ ಎಡೆಗಳಲ್ಲಿ ಕಂಡು ಬರಬಹುದು. ಕೆಲವೊಮ್ಮೆ ಔಷಧಗಳೂ ಬಾಯಿ ವಾಸನೆಗೆ ಎಡೆ ಮಾಡಿಕೊಡಬಲ್ಲದು. ಧೂಮಪಾನ, ಮಧ್ಯಪಾನ ಮತ್ತು ತಂಬಾಕು ಸೇವಿಸುವ ವ್ಯಕ್ತಿಗೆ ಈ ದುರ್ವಾಸನೆ ತಪ್ಪಿದ್ದಲ್ಲ.

ಮತ್ತಿತರೆ ಕಾರಣಗಳೇನು?
1.ದಿನಕ್ಕೆರಡು ಬಾರಿ ಬಾಯಿ, ಹಲ್ಲು, ನಾಲಗೆಯನ್ನು ಸ್ವಚ್ಛಗೊಳಿಸದಿದ್ದರೆ..
2.ಉಪವಾಸ ಮಾಡುವುದು..
3.ಬಾಯಿ ಹುಳುಕು ಹಲ್ಲುಗಳಲ್ಲಿ ಆಹಾರ ಪದಾರ್ಥ ಸಿಕ್ಕಿಹಾಕಿ ಕೊಂಡರೆ..
4.ಜಠರ...ಗಾಸ್ಟ್ರಿಕ್, ಮಧುಮೇಹ, ಕರುಳು, ಶ್ವಾಸಕೊಶದ ಸೋಂಕು...
5.ನಿರಂತರ ಔಷಧಿ ಸೇವನೆ...
6.ವಸಡಿನ ಸುತ್ತ ಬೆಳೆದಿರುವ ದಂತ ಪಾಚಿ ಮತ್ತು ದಂತಕಿಟ್ಟ...
7.ಈರುಳ್ಳಿ, ಬೆಳ್ಳುಳ್ಳಿಯಂಥ ಆಹಾರ ಪದಾರ್ಥಗಳ ಸೇವನೆ...
8.ಪಿತ್ತಕೋಶದ ರೋಗ, ಆಹಾರ ಪಚನವಾಗದಿರುವುದು, ಜಠರ ಸಂಬಂಧಿ ರೋಗಗಳು...
9.ಬಾಯಿ ಹಾಗೂ ಶ್ವಾಸಕೊಶದ ಕ್ಯಾನ್ಸರ್
10.ಮೂತ್ರಪಿಂಡ ಹಾಗೂ ಯಕೃತ್ತಿನ ಕಾಯಿಲೆ..
11.ದ್ರವಾಹಾರಾ ಸೇವನೆ ಕೊರತೆ..
12.ಆಹಾರ ಜೀರ್ಣವಾಗದ ಕರುಳು ಹಾಗೂ ಅನ್ನನಾಳದ ತೊಂದರೆ...
13.ಮಾನಸಿಕ ವೈಕಲ್ಯ ಹಾಗೂ ನರದೌರ್ಬಲ್ಯ ಇರುವವರು ಬಾಯಿಯ ಶುದ್ಧತೆ ಕಾಪಾಡಿಕೊಳ್ಳಲು ಕಷ್ಟವಾದರೆ...

ದುರ್ವಾಸನೆ ಓಡಿಸೋದು ಹೇಗೆ..
1.ದ್ರವಾಹಾರ ಹೆಚ್ಚು ಸೇವಿಸಿ. ದಿನಕ್ಕೆರಡು ಸಲ ಬಾಯಿ ಶುಚಿಗೊಳಿಸಿ..
2.ಕೋಲಾದಂಥ ಅನಿಲಯುಕ್ತ ದ್ರಾವಣಗಳನ್ನು ಸೇವಿಸದ ನಂತರ ಬಾಯಿ ಶುಚಿಗೊಳಿಸಿಕೊಳ್ಳಿ...
3.ಧೂಮಪಾನ, ಮಧ್ಯಪಾನ, ತಂಬಾಕು ಸೇವನೆಯಿಂದ ದೂರವಿರಿ...
4. ಹಲ್ಲುಜ್ಜಿದ ಬಳಿಕ ದಂತದಾರದ ಸಹಾಯದಿಂದ ಹಲ್ಲುಗಳ ಸಂದಿಯನ್ನು ಶುಚಿಗೊಳಿಸಿ...
5.ಈರುಳ್ಳಿ, ಬೆಳ್ಳುಳ್ಳಿ ಮುಂತಾದವುಗಳನ್ನು ಆದಷ್ಟು ನಿಯಂತ್ರಿಸಿ...
6.ಬಾಯಿ ವಾಸನೆಗೆ ಸೂಕ್ತ ಕಾರಣ ತಿಳಿದುಕೊಂಡು, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ...
7.ಗ್ಯಾಸ್ಟ್ರಿಕ್ ತೊಂದರೆ ಇದ್ದಲ್ಲಿ, ಸೂಕ್ತ ಪರಿಹಾರ ಪಡೆಯಿರಿ..
8.ಮಧುಮೇಹಿಗಳು ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು..
9.ಊಟವಾದ ಬಳಿಕ ಲವಂಗ, ಏಲಕ್ಕಿ, ತುಳಸಿಗಳಂಥವುಗಳನ್ನು ಬಳಸಿ...
10.ದಂತಕ್ಷಯದಿಂದ ದಂತಕುಳಿಗಳಿದ್ದರೆ, ಚಿಕಿತ್ಸೆ ಪಡೆಯಿರಿ...
11.ಪ್ರತಿ ಆರು ತಿಂಗಳಿಗೊಮ್ಮೆ ಹಲ್ಲುಗಳನ್ನು ಶುಚಿಗೊಳಿಸಿಕೊಳ್ಳಬೇಕು..ಹಲ್ಲಿನ ಸುತ್ತ ದಂತ ಕಿಟ್ಟ ಮತ್ತು ದಂತ ಪಾಚಿ ಬೆಳೆಯದಂತೆ ನೋಡಿಕೊಳ್ಳಿ...
12.ಜೊಲ್ಲು ರಸದ ಉತ್ಪತ್ತಿ ಕಡಿಮೆಯಾದಲ್ಲಿ ಸೂಕ್ತ ಚಿಕಿತ್ಸೆ ಪಡೆಯಿರಿ..ಔಷಧಿ ಬಾಯಿ ದುರ್ವಾಸನೆಗೆ ಕಾರಣವಾಗಿದ್ದಲ್ಲಿ, ಬದಲಿ ಔಷಧಿ ಪಡೆಯಿರಿ..
13.ಸಕ್ಕರೆ ಅಂಶವುಳ್ಳ ಸಿಹಿ ತಿಂಡಿಗಳನ್ನು ತಿಂದರೆ, ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಿ. ಮೂರು ತಿಂಗಳಿಗೊಮ್ಮೆ ಬ್ರಷ್ ಬದಲಾಯಿಸಿ..
14.ವಸಡಿನಲ್ಲಿ ರಕ್ತ ಒಸರುತ್ತಿದ್ದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳಿ ರಕ್ತ ಒಸರುವಿಕೆಗೆ ಕಾರಣವಾದ ಅಂಶಗಳನ್ನು ಸರಿಪಡಿಸಿಕೊಳ್ಳಿ...

-ಡಾ.ಮುರಳಿ ಮೋಹನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com