ನವದೆಹಲಿ: ಆಂಟಿಬಯೋಟಿಕ್ಸ್ ನ ದುರ್ಬಳಕೆ ತಪ್ಪಿಸುವುದಕ್ಕೆ ಭಾರತ ಶೀಘ್ರವೇ ಪ್ರತಿಜೀವಕಗಳ(ಆಂಟಿಬಯೋಟಿಕ್ಸ್) ನ ಬಳಕೆ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಹೆಚ್ಚು ಪ್ರತಿಜೀವಕಗಳ ಬಳಕೆಯಿಂದ ಉಂಟಾಗುವ ಅಪಾಯವನ್ನು ತಡೆಯಲು, ಪ್ರಮಾಣಿತ ಚಿಕಿತ್ಸೆ ಮಾರ್ಗಸೂಚಿ ಅಭಿವೃದ್ಧಿಪಡಿಸುವುದು ಅಗತ್ಯವಿದ್ದು, ಶೀಘ್ರವೇ ಭಾರತ ಅದನ್ನು ಬಿಡುಗಡೆ ಮಾಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರ ಮುಖ್ಯ ವೈಜ್ಞಾನಿಕ ಸಲಹೆಗಾರ ರಾಜೇಶ್ ಭಾಟಿಯಾ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜೇಶ್ ಭಾಟಿಯಾ, ಪ್ರತಿಜೀವಕ ನಿರೋಧಕ(ಆಂಟಿಬಯೋಟಿಕ್ಸ್ ರೆಸಿಸ್ಟೆನ್ಸ್) ನಿಂದಾಗಿ 2050 ರ ವೇಳೆಗೆ ವಿಶ್ವಾದ್ಯಂತ 10 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ ಎಂದು ಹೇಳಿದ್ದಾರೆ. ಮಾನವಕುಲದ ಪ್ರಯತ್ನಗಳಿಗೆ ಇದು ದೊಡ್ಡ ಅಪಾಯವಾಗಿದೆ ಎಂದಿದ್ದಾರೆ.
ಪ್ರತಿಜೀವಕಗಳು ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತಿದೆ. ಪ್ರತಿಜೀವಕ ನಿರೋಧಕ ರೋಗಿಯ ಸುರಕ್ಷತೆಗೆ ಅತಿ ದೊಡ್ಡ ಅಪಾಯವಾಗಿದೆ ಎಂದು ಹೇಳಿದ್ದಾರೆ. ಪ್ರತಿಜೀವಕ ನಿರೋಧಕ ವನ್ನು ನಿಧಾನಗೊಳಿಸಲು ಸರಿಯಾದ ಪ್ರಮಾಣದಲ್ಲಿ ಆಂಟಿಬಯೋಟಿಕ್ಸ್ ನ ಬಳಕೆ ಮುಖ್ಯವಾಗುತ್ತದೆ, ಸೂಚನೆ ಪ್ರಕಾರ ಮಾತ್ರ ಇದನ್ನು ಬಳಸಬೇಕಾಗುತ್ತದೆ, ಅದನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂದು ಭಾಟಿಯಾ ತಿಳಿಸಿದ್ದಾರೆ.
Advertisement