ಹೇಗಿದೆ ನಿಮ್ಮ ಮಾನಸಿಕ ಆರೋಗ್ಯ? ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಸ್ವಾಸ್ಥ್ಯವೂ ಬಹಳ ಮುಖ್ಯ. ಆದರೆ ಆಶ್ಚರ್ಯ ಎಂದರೆ ಜನ ದೇಹದ ಆರೋಗ್ಯದ ಬಗ್ಗೆ ಕಾಳಜಿ ಮಾಡಿದಷ್ಟು ಮಾನಸಿಕ ಆರೋಗ್ಯದ ಬಗ್ಗೆ ಲಕ್ಷ್ಯ ಕೊಡುವುದಿಲ್ಲ.
Published: 11th October 2022 03:57 PM | Last Updated: 11th October 2022 06:35 PM | A+A A-

ಸಾಂದರ್ಭಿಕ ಚಿತ್ರ
ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಸ್ವಾಸ್ಥ್ಯವೂ ಬಹಳ ಮುಖ್ಯ. ಆದರೆ ಆಶ್ಚರ್ಯ ಎಂದರೆ ಜನ ದೇಹದ ಆರೋಗ್ಯದ ಬಗ್ಗೆ ಕಾಳಜಿ ಮಾಡಿದಷ್ಟು ಮಾನಸಿಕ ಆರೋಗ್ಯದ ಬಗ್ಗೆ ಲಕ್ಷ್ಯ ಕೊಡುವುದಿಲ್ಲ. ಈ ಮನೋಭಾವನೆಯನ್ನು ಹೋಗಲಾಡಿಸಲು, ಮೆಂಟಲ್ ಹೆಲ್ತ್ ಬಗ್ಗೆ ಅರಿವು ಮೂಡಿಸಲೆಂದೆ ವರ್ಲ್ಡ್ ಮೆಂಟಲ್ ಹೆಲ್ತ್ ಡೇ ಅನ್ನು ಆಚರಿಸಲಾಗುತ್ತದೆ. ಬದಲಾಗುತ್ತಿರುವ ಇತ್ತೀಚಿನ ವಿದ್ಯಮಾನಗಳಲ್ಲಿ ಮಾನಸಿಕ ಅಸ್ವಸ್ಥ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗುತ್ತಿದೆ.
ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಮೊದಲ ಬಾರಿಗೆ ಅಕ್ಟೋಬರ್ 10, 1992 ರಂದು ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ನ ವಾರ್ಷಿಕ ಚಟುವಟಿಕೆಯಾಗಿ ಆಚರಿಸಲಾಯಿತು. ಈ ದಿನವು ಆರಂಭದಲ್ಲಿ ಯಾವುದೇ ರೀತಿಯ ನಿರ್ದಿಷ್ಟ ಥೀಮ್ ಹೊಂದಿರಲಿಲ್ಲ ಮತ್ತು ಅದರ ಗುರಿ ಮಾನಸಿಕ ಆರೋಗ್ಯ ಸಮರ್ಥನೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದಾಗಿತ್ತು. ಈ ದಿನದ ಅಭಿಯಾನದ ಜನಪ್ರಿಯತೆಯನ್ನು ನೋಡಿ, 1994ರಲ್ಲಿ ಮೊದಲ ಬಾರಿಗೆ ದಿನದ ಥೀಮ್ ಅನ್ನು ಬಳಸಲಾಯಿತು. ಈ ದಿನದ ಮೊಲದ ಥೀಮ್ "ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು"ಎಂಬುವುದಾಗಿತ್ತು.
ಮಾನಸಿಕ ಆರೋಗ್ಯದಲ್ಲಿನ ಹೂಡಿಕೆಯು ಹಲವಾರು ದೇಶಗಳಲ್ಲಿ ತೀರಾ ಕಳಪೆಯಾಗಿದೆ. ಭಾರತವು ತನ್ನ ಆರೋಗ್ಯ ಬಜೆಟ್ನ ಕೇವಲ 2% ರಷ್ಟು ಮಾನಸಿಕ ಆರೋಗ್ಯಕ್ಕಾಗಿ ಖರ್ಚು ಮಾಡುತ್ತದೆ. ಕನಿಷ್ಠ ಅಂದರೆ ಅತ್ಯಂತ ಅಭಿವೃದ್ಧಿ ಹೊಂದಿದ ಮತ್ತು ಪ್ರಗತಿಶೀಲ ರಾಷ್ಟ್ರಗಳು 10% ರಷ್ಟು ಖರ್ಚು ಮಾಡುತ್ತವೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಬಳಸುವಾಗ ಎಚ್ಚರ ವಹಿಸಿ, ಆರು ತಿಂಗಳೊಳಗೆ ಖಿನ್ನತೆ ಉಂಟಾಗಬಹುದು!
ಜಾಗತಿಕವಾಗಿ ಎಂಟು ಜನರಲ್ಲಿ ಒಬ್ಬರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ. ಜಾಗತಿಕವಾಗಿ, ಕೋವಿಡ್-19 ಸಾಂಕ್ರಾಮಿಕಕ್ಕೂ ಮುನ್ನ 8 ಮಂದಿಯಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಆರೋಗ್ಯದ ಸಮಸ್ಯೆಯಲ್ಲಿದ್ದರು. ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಚಿಕಿತ್ಸೆಯಲ್ಲಿನ ಅಂತರ ಅಗಾಧವಾಗಿದೆ.
ಜಗತ್ತು ಅನಿಶ್ಚಿತ ಸಮಯವನ್ನು ಎದುರಿಸುತ್ತಿದೆ. ಸಾಂಕ್ರಾಮಿಕ ರೋಗ, ವಿವಿಧ ದೇಶಗಳಲ್ಲಿನ ಯುದ್ಧಗಳು, ಹವಾಮಾನ ತುರ್ತುಸ್ಥಿತಿ ಮತ್ತು ದೊಡ್ಡ ಜನಸಂಖ್ಯೆಯ ಸ್ಥಳಾಂತರವು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರ ವಿರುದ್ಧ ವ್ಯಾಪಕವಾದ ಕಳಂಕ ಮತ್ತು ತಾರತಮ್ಯವಿದೆ. ಅನೇಕ ದೇಶಗಳು ಮಾನಸಿಕ ಆರೋಗ್ಯ ನೀತಿಯನ್ನು ಕಾಗದದಲ್ಲಿ ಮಾತ್ರ ಹೊಂದಿವೆ. ಅನುಷ್ಠಾನ ಮಾಡಿಲ್ಲ, ಕಡಿಮೆ ಹೂಡಿಕೆ, ಕಳಪೆ ಬೆಂಬಲ ಮತ್ತು ಮೂಲಸೌಕರ್ಯದ ಕೊರತಿಯಿದೆ, ಹೀಗಾಗಿ ಇದು ಕೊನೆಗೊಳ್ಳಬೇಕು.
ಕೋವಿಡ್ ನಂತರ ಆತಂಕ ಮತ್ತು ಖಿನ್ನತೆಯಂತಹ ಸಾಮಾನ್ಯ ಮಾನಸಿಕ ಅಸ್ವಸ್ಥತೆಗಳಲ್ಲಿ ಏಕಾಏಕಿ 25% ಹೆಚ್ಚಳವಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಭಾರತದಲ್ಲಿ, ನಾವು ಈಗಾಗಲೇ ಪರಿಣಾಮವನ್ನು ನೋಡಬಹುದು. ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದ ರಾಜ್ಯಗಳಲ್ಲಿ ಒಂದಾದ ಕೇರಳದಲ್ಲಿ ಆತ್ಮಹತ್ಯೆ ಪ್ರಮಾಣವು ಲಕ್ಷಕ್ಕೆ 27.2 ಕ್ಕೆ ಏರಿಕೆಯಾಗಿದೆ. ಆದರೂ, ನಮ್ಮಲ್ಲಿ ಯಾವುದೇ ಸಮಗ್ರ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಆತ್ಮಹತ್ಯೆ-ತಡೆಗಟ್ಟುವ ಕಾರ್ಯಕ್ರಮಗಳಿಲ್ಲ.
ಇದನ್ನೂ ಓದಿ: ಮಾನಸಿಕ ಆರೋಗ್ಯ ವರ್ಧನೆಗೆ ಏನು ಮಾಡಬೇಕು? ಈ 15 ಸೂತ್ರಗಳನ್ನು ಪಾಲಿಸಿದರೆ ಸಾಕು!
ಯುವಜನರಲ್ಲಿ ಸಾವಿಗೆ ಎರಡನೇ ದೊಡ್ಡ ಕಾರಣ ಆತ್ಮಹತ್ಯೆ. ಕ್ಯಾನ್ಸರ್ ಮತ್ತು ಹೃದ್ರೋಗಗಳ ನಂತರ ಆತ್ಮಹತ್ಯೆಗೆ ಹೆಚ್ಚಿನ ಜನರು ಬಲಿಯಾಗುತ್ತಿದ್ದಾರೆ. ಮದ್ಯಪಾನ ಮತ್ತು ಮಾದಕ ವ್ಯಸನವು ನಮ್ಮ ಸಮಾಜ ಎದುರಿಸುತ್ತಿರುವ ಇತರ ಗಂಭೀರ ಸಮಸ್ಯೆಗಳಾಗಿವೆ. ಸರ್ಕಾರದ ನೀತಿ ಮದ್ಯಪಾನವನ್ನು ಪ್ರೋತ್ಸಾಹಿಸುವಂತಿದೆ. ವಾಸ್ತವವಾಗಿ, ಎಲ್ಲಾ ಮದ್ಯ ವ್ಯಸನಿಗಳಲ್ಲಿ 10% ರಷ್ಟು ಜನರು ತಮ್ಮ ಜೀವನವನ್ನು ಆತ್ಮಹತ್ಯೆಯಲ್ಲಿ ಕೊನೆಗೊಳಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನಮ್ಮ ಸಾಮಾಜಿಕ ಪರಿಸರವು ಮಾದಕ ವ್ಯಸನವನ್ನು ನಿರ್ಮೂಲನೆ ಮಾಡುವ ಬದ್ಧತೆ ತೋರಬೇಕು. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಹೊಸ ಮತ್ತು ಪರಿಣಾಮಕಾರಿ ಮಾರ್ಗಗಳು ಈಗ ಲಭ್ಯವಿದೆ, ಹೀಗಾಗಿ ಅದನ್ನು ಸೂಕ್ತವಾಗಿ ಅನಷ್ಠಾನಗೊಳಿಸುವ ಅಗತ್ಯವಿದೆ.
ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳು, ಹದಿಹರೆಯದವರ ಮತ್ತು ಶಾಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಮಕ್ಕಳು, ಮಹಿಳೆಯರು, ಅಂಗವಿಕಲರು, ವೃದ್ಧರು, ವಲಸಿಗರು ಮತ್ತು ನಿರಾಶ್ರಿತರು ಮುಂತಾದ ದುರ್ಬಲ ವರ್ಗಗಳಿಗೆ ವಿಶೇಷ ಗಮನ ಹರಿಸುವುದು ಅವಶ್ಯಕ ಮತ್ತು ಪರಿಣಾಮಕಾರಿಯಾಗಿದೆ. ಮಾನಸಿಕ ಆರೋಗ್ಯವಿಲ್ಲದೆ ಆರೋಗ್ಯವಿಲ್ಲ" ಎಂಬ WHO ಧ್ಯೇಯವಾಕ್ಯವನ್ನು ಪರಿಪಾಲಿಸಬೇಕಾಗಿದೆ.
ಕೋವಿಡ್ ರೋಗ ಬಂದ ನಂತರ ಮಾನಸಿಕ ಕ್ಷೋಭೆ ತೀವ್ರ ಗತಿಯಲ್ಲಿ ಹೆಚ್ಚಾಗಿದೆ. ಅದರಲ್ಲೂ ಮೊದಲ ವರ್ಷ, ಅಂದರೆ 2020-21ರ ಅವಧಿಯಲ್ಲಿ ಶೇ. 25ಕ್ಕಿಂತ ಹೆಚ್ಚು ಜನರಲ್ಲಿ ಆತಂಕ, ಖಿನ್ನತೆ ಇತ್ಯಾದಿ ಮಾನಸಿಕ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.