ವಿಟಮಿನ್ ಡಿ ಕೊರತೆಯು ತೀವ್ರವಾದ ಕಂಜಂಕ್ಟಿವಿಟಿಸ್ ಗೆ ಕಾರಣವಾಗಬಹುದು: ತಜ್ಞರ ಎಚ್ಚರಿಕೆ
ಬೆಂಗಳೂರು: ರೋಗನಿರೋಧಕ ಶಕ್ತಿ ಕಡಿಮೆಯಾದವರಲ್ಲಿ ತೀವ್ರವಾದ ಸೋಂಕಿಗೆ ಕಾರಣವಾದ ಕೋವಿಡ್ನಂತೆಯೇ, ತೀವ್ರವಾದ ಕಂಜಂಕ್ಟಿವಿಟಿಸ್ (ಗುಲಾಬಿ ಕಣ್ಣಿನ ಸಮಸ್ಯೆ) ಪ್ರಕರಣಗಳು ವಿಟಮಿನ್ ಡಿ ಕೊರತೆಯಿರುವ ರೋಗಿಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ತಜ್ಞರು ಗಮನಿಸಿದ್ದಾರೆ.
ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ ರೋಹಿತ್ ಶೆಟ್ಟಿ ಅವರು ನ್ಯೂ ಸಂಡೆ ಎಕ್ಸ್ಪ್ರೆಸ್ಗೆ ಈ ಬಗ್ಗೆ ಮಾಹಿತಿ ನೀಡಿದ್ದು, “ನಮ್ಮದು ತೃತೀಯ ಆರೈಕೆ ಕೇಂದ್ರವಾಗಿರುವುದರಿಂದ, ಹೆಚ್ಚು ತೀವ್ರವಾದ ಪ್ರಕರಣಗಳನ್ನು ನಮಗೆ ಉಲ್ಲೇಖಿಸಲಾಗುತ್ತಿದೆ. ಇತ್ತೀಚೆಗೆ ಎಲ್ಲಾ ಕೇಂದ್ರಗಳಲ್ಲಿ ಹೊರರೋಗಿ ವಿಭಾಗದಲ್ಲಿ ಸುಮಾರು 150-160 ರೋಗಿಗಳು ಆಗಮಿಸುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ತೀವ್ರವಾದ ಕಂಜಂಕ್ಟಿವಿಟಿಸ್ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೆಚ್ಚಿನ ಸಂದರ್ಭಗಳಲ್ಲಿ ವೈರಲ್ ಕಂಜಂಕ್ಟಿವಿಟಿಸ್ ಗೆ ಅಡೆನೋ ವೈರಸ್ ಕಾರಣವಾಗಿರುತ್ತದೆ. ಸಾಮಾನ್ಯವಾಗಿ "ಗುಲಾಬಿ ಕಣ್ಣು" ಎಂದು ಕರೆಯಲ್ಪಡುವ ಇದು ಕಣ್ಣಿನ ಲೋಳೆಯ ವಿಸರ್ಜನೆ, ಊತ, ತುರಿಕೆ ಮತ್ತು ಕಣ್ಣುರೆಪ್ಪೆಗಳ ಕಠಿಣಗೊಳಿಸುವಿಕೆ ಮತ್ತು ಕಣ್ಣಿನ ರಕ್ತನಾಳಗಳ ವಿಸ್ತರಣೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಿಟಮಿನ್ ಡಿ ಕೊರತೆಯಿರುವ ರೋಗಿಗಳು ಉರಿಯೂತದಿಂದ ಉಂಟಾಗುವ ಹಾನಿಯನ್ನು ನಿಗ್ರಹಿಸಲು ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ತೀವ್ರವಾದ ಸೋಂಕನ್ನು ಎದುರಿಸುತ್ತಿರುತ್ತಾರೆ. ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯದಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯು ಸೋಂಕುಗಳಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಭಾರೀ ಮಳೆ ಮತ್ತು ಬದಲಾಗುತ್ತಿರುವ ಹವಾಮಾನದಿಂದಾಗಿ ದೇಶಾದ್ಯಂತ ಸೋಂಕುಗಳ ಉಲ್ಬಣವು ಕಂಡುಬಂದಿದೆ ಎಂದು ಡಾ ಶೆಟ್ಟಿ ವಿವರಿಸಿದರು. ಆದರೆ ಏರಿಕೆಗೆ ಅದೊಂದೇ ಕಾರಣವಲ್ಲ. ಯಾವುದೇ ನಿರಂತರ ಕಣ್ಣಿನ ತೊಂದರೆಗಳನ್ನು ತಪ್ಪಿಸಲು ಜನರು ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವತ್ತ ಕೆಲಸ ಮಾಡಬೇಕು. ಇತ್ತೀಚೆಗೆ ಡಾ.ಶೆಟ್ಟಿಯವರ ಆಸ್ಪತ್ರೆಗೆ ಭೇಟಿ ನೀಡಿದ ರೋಗಿಯೊಬ್ಬರು ಎರಡು ವಾರಗಳ ಹಿಂದೆ ಗುಲಾಬಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಕಾರ್ನಿಯಲ್ ಸ್ಕಾರ್ರಿಂಗ್ ಅನ್ನು ಅಭಿವೃದ್ಧಿಪಡಿಸಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರೋಗ್ಯ ವೃದ್ಧಿಗೆ 'ಸಂತೋಷ'ದ ಮದ್ದು!
ಇನ್ನೊಂದು ಪ್ರಕರಣದಲ್ಲಿ ತಾಯಿಯೊಬ್ಬಳು ತನ್ನ ನಾಲ್ಕು ತಿಂಗಳ ಮಗುವಿನೊಂದಿಗೆ ಶನಿವಾರ ಕಂಜಂಕ್ಟಿವಿಟಿಸ್ನೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಮಗುವಿನ ಸ್ಥಿತಿ ತುಂಬಾ ಗಂಭೀರವಾಗಿತ್ತು ಮತ್ತು ಸೋಂಕಿನಿಂದ ಅವಳು ಕಣ್ಣು ತೆರೆಯಲು ಸಾಧ್ಯವಾಗಿರಲಿಲ್ಲ. ಮಕ್ಕಳು ಹೆಚ್ಚು ಆಟವಾಡುವುದರಿಂದ ಕೈಗೆ ಸಿಕ್ಕ ವಸ್ತುಗಳನ್ನು ಹಿಡಿದು ಆಟವಾಡುತ್ತಾರೆ. ಅನೇಕ ವಸ್ತುಗಳನ್ನು ಸ್ಪರ್ಶಿಸುವ ಸಾಧ್ಯತೆಯಿರುವುದರಿಂದ, ಅವರು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ಡಾ.ಶೆಟ್ಟಿ ಹೇಳಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಅವರು ಮಾತನಾಡಿ, ಕಳೆದ 2-3 ವಾರಗಳಲ್ಲಿ ಹೆಚ್ಚಿನ ಮಕ್ಕಳು ಬಾಧಿತರಾಗಿರುವ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಮಿಂಟೋ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸರಾಸರಿ 100 ರೋಗಿಗಳು ದಾಖಲಾಗುತ್ತಿದ್ದು, ಅವರಲ್ಲಿ ಶೇ 60ರಷ್ಟು ಮಕ್ಕಳು ಇದ್ದಾರೆ. ಜನರು ಉತ್ತಮ ಕೈ ನೈರ್ಮಲ್ಯವನ್ನು ಅನುಸರಿಸಬೇಕು, ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸುವುದನ್ನು ತಪ್ಪಿಸಿ ಮತ್ತು ಕಣ್ಣುಗಳನ್ನು ನಿರಂತರವಾಗಿ ಸ್ಪರ್ಶಿಸುವುದನ್ನು ತಪ್ಪಿಸಲು ಮಕ್ಕಳಿಗೆ ಕನ್ನಡಕವನ್ನು ಧರಿಸುವಂತೆ ವೈದ್ಯರು ಸಲಹೆ ನೀಡಬೇಕು. ಯಾವುದೇ ಕುಟುಂಬದ ಸದಸ್ಯರು ಸೋಂಕಿಗೆ ಒಳಗಾಗಿದ್ದರೆ, ಮಕ್ಕಳು ಶಾಲೆಗೆ ಹೋಗುವುದನ್ನು ನಿರ್ಬಂಧಿಸಬೇಕು. ಏಕೆಂದರೆ ಅವರು ವೈರಸ್ನ ವಾಹಕಗಳಾಗಿರಬಹುದು ಎಂದು ಹೇಳಿದ್ದಾರೆ.