ತಮಿಳು ನಾಡಿನಲ್ಲಿ ಕನ್ನಡ ಸಾಹಿತ್ಯದ ಕಂಪು

ಚೆನ್ನೈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಸಿದ್ದಲಿಂಗಯ್ಯ
ಚೆನ್ನೈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಸಿದ್ದಲಿಂಗಯ್ಯ

ತಮಿಳು ನಾಡೆಂಬ ಹೆಸರನ್ನು ಕೇಳಿದರೇ ನಮ್ಮ ನಾಡಿನ ಕನ್ನಡಿಗರು ಮನಸ್ಸನ್ನು ಹುಳ್ಳಗೆ ಮಾಡಿಕೊಂಡು ಅದು ಕನ್ನಡ ವೈರಿಯೆಂಬ ತಲೆತಲಾಂತರದಿಂದ ಬಂದಿರುವ ಅಪವಾದವನ್ನು ಇಂದಿಗೂ ಪ್ರತಿಪಾದಿಸುವುದುಂಟು.  ಇನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ತಮಿಳು ನಾಡು ಘಟಕ ವುಂಟೆಂದೂ, ಅದು ಚೆನ್ನೈ ನಗರದಲ್ಲಿಯೇ ಸತತವಾಗಿ ಮೂರನೆ ಬಾರಿ ೨ ದಿನಗಳ  ವಾರ್ಷಿಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಏರ್ಪಡಿಸಿತೆಂದರೆ ನಿಮಗೆ ಸೋಜಿಗವಾಗಬಹುದು.

ಹೌದು, ಈ ಬಾರಿಯ ತಮಿಳುನಾಡಿನ ಕನ್ನಡೋತ್ಸವ ನೆಡೆದದ್ದು ಮಾರ್ಚ್ ೨೧-೨೨ ರಂದು, ಇಲ್ಲಿನ ಟಿ ನಗರದ ಕರ್ನಾಟಕ ಸಂಘದ ಡಾ. ರಾಮರಾವ್ ಕಲಾಮಂಟಪ ದಲ್ಲಿ.

ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸುವ ಈ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳಕ್ಕೆ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವವೂ ಉಂಟು. ಹೊರನಾಡಿನಲ್ಲಿರುವ ಕನ್ನಡಿಗರ ಪ್ರತಿಭೆ ಮತ್ತು ಕಲಾಪ್ರೋತ್ಸಾಹಕ್ಕಾಗಿಯೂ ಮತ್ತು ಕನ್ನಡನಾಡಿನ ಮಣ್ಣಿನ ನಂಟನ್ನು ಮರೆಯದೇ ಉಳಿಸಿಕೊಂಡು ಬೆಳೆಸುವುದಕ್ಕಾಗಿಯೆ ಈ ೨ ದಿನಗಳ ಸಮ್ಮೇಳನವನ್ನು ನೆಡೆಸುತ್ತಾರೆ.  ಈ ಬಾರಿಯ  ಶ್ರವಣಬೆಳಗೊಳದ ೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ಸಿದ್ಧಲಿಂಗಯ್ಯನವರು ಇಲ್ಲಿಗೂ ಬಂದು ಎರಡೂ ದಿನಗಳ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಅದ್ಧೂರಿಯಾಗಿ ನೆಡೆಸಿಕೊಟ್ಟಿದ್ದು ನಮ್ಮ ಸಮಾರಂಭಕ್ಕೆ ಮೆರುಗು ನೀಡಿ ತಕ್ಕ ಗೌರವವನ್ನೂ ತಂದುಕೊಟ್ಟಿತು.

ಈ ಕಾರ್ಯಕ್ರಮಕ್ಕೆ ಧನಾತ್ಮಕವಾಗಿ ಸ್ಪಂಧಿಸಿದ ಇಲ್ಲಿನ ಹಲವು ಕನ್ನಡ ಸಂಘಗಳ ಸದಸ್ಯರು ಸಂಸಾರ ಸಮೇತ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸುದರಲ್ಲಿಯೂ ಭಾಗವಹಿಸುದರಲ್ಲಿಯೂ ಉತ್ಸಾಹ ಪೂರ್ವಕವಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡು, ಕನ್ನಡ ಸಾಹಿತ್ಯ ಪರಿಷತ್ ಮತ್ತಿತರ ವ್ಯವಸ್ಥಾಪಕರ ಸ್ಥೈರ್ಯವನ್ನು ಹೆಚ್ಚಿಸಿ ಕೈ ಬಲಪಡಿಸಿದರು.

ಮೊದಲನೆಯ ದಿನ :
ಬೆಳಿಗ್ಗೆ ಸಮ್ಮೇಳನಾಧ್ಯಕ್ಷರನ್ನು ಅತಿ ಗೌರವಪೂರ್ವಕವಾಗಿ, ಎಲ್ಲಾ ಸದಸ್ಯರು ವಿಶೇಷವಾಗಿ ನಿರ್ಮಿಸಿದ್ದ ಡಾ. ಯು ಆರ್‍ ಅನಂತಮೂರ್ತಿ ಮಹಾಮಂಟಪದ ದ್ವಾರದಲ್ಲಿ ಸ್ವಾಗತಿಸಿ ಒಳಗಿನ ಹವಾನಿಯಂತ್ರಿತ ಡಾ ಪಿ ಬಿ ಶ್ರೀನಿವಾಸ ವೇದಿಕೆಗೆ ಬರಮಾಡಿಕೊಂಡರು.

ಡಾ ಸಿದ್ಧಲಿಂಗಯ್ಯನವರ ಅಧ್ಯಕ್ಷ  ಭಾಷಣದ ನಂತರ ಎ. ದಯಾನಂದ, ಕನ್ನಡ ಮತ್ತು ಸಂಸ್ಜೃತಿ ಇಲಾಖೆ ಬೆಂಗಳೂರು  ಕನ್ನಡಿಗರನ್ನು ಉದ್ದೇಶಿಸಿ  ಮಾತನಾಡಿ, ಹೊರರಾಜ್ಯದಲ್ಲಿದ್ದೂ ಭೇಧಭಾವಗಳನ್ನು ಮರೆತು ಇಲ್ಲಿನ ಕನ್ನಡಿಗರು ಆಚರಿಸುತ್ತಿರುವ ವಾರ್ಷಿಕ ಕನ್ನಡ ಹಬ್ಬವನ್ನು ಶ್ಲಾಘಿಸಿ , ಕನ್ನಡ ಡಿಂಡಿಮ ವನ್ನು ಎಲ್ಲೆಲ್ಲಿಯೂ ಬಾರಿಸುವುದರ ಈ ಉದಾಹರಣೆಯನ್ನು ಅಭಿನಂದನೀಯವೆಂದು ಅಭಿಪ್ರಾಯ ಪಟ್ಟರು. ನಂತರ ಸಾಹಿತ್ಯ ವೈದ್ಯಕೀಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ  ಗಣನೀಯ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಲಾಯಿತು.

ನಂತರ ಜೋಗಿಲ ಸಿದ್ಧರಾಜು ಮತ್ತು ತಂಡದವರಿಂದ ಜಾನಪದ ಝೇಂಕಾರ ಎಂಬ ಸಂಗೀತ ಕಾರ್ಯಕ್ರಮ ಅತಿ ಮಧುರವಾಗಿಯೂ ನಾಡಿನ ಮಣ್ಣಿನ ಜಾನಪದ ಸೊಗಡನ್ನು ಒಳಗೊಂಡು ಮೂಡಿ ಬಂದು ಸಭಿಕರನ್ನು ತಣಿಸಿತು.

ಡಾ  ಎಮ್.ಮರಿಯಪ್ಪ ಭಟ್ ದತ್ತಿ ಉಪನ್ಯಾಸದಲ್ಲಿ ತಮಿಳುನಾಡು ಕನ್ನಡಿಗರ  ಕೊಡುಗೆ ಬಗ್ಗೆ ಚೆನ್ನೈ ಪಚ್ಚೆಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಕೃಷ್ಣಸ್ವಾಮಿ ಹಲವು ಸ್ವಾರಸ್ಯಕರ ಮಾಹಿತಿಯನ್ನು ನೀಡಿದರು.

ನಂತರ ನೆಡೆದ ಕವಿ ಗೋಷ್ಟಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಕವಿ ಶ್ರೀ ಮುದಲ್ ವಿಜಯ್ ಇವರು ವಹಿಸಿದ್ದರು. ಕಾವ್ಯವಾಚನ ಮಾಡಿದವರಲ್ಲಿ ಶ್ರೀ ವಸಂತ್ ಹೆಗಡೆ, ಡಾ ತಮಿಳ್ ಸೆಲ್ವಿ, ಈಶ್ವರ ಕಂಬಾರ್ , ಪಾವಂಜೆ ರಾಘವೇಂದ್ರ ಭಟ್, ಗೀತಾ ಪೆಜತ್ತಾಯ ಅಲ್ಲದೇ ಮದ್ರಾಸ್ ವಿವಿಯ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ ಶಶಿ ಕುಮಾರ್ ಮುಂತಾದವರು

ಇದ್ದು ತಮ್ಮ ಕಾವ್ಯ ಲಹರಿಯಿಂದ ಅಲ್ಲಿ ನೆರೆದಿದ್ದ ಕಲಾರಸಿಕರ ಮನಸೂರೆಗೊಂಡರು.
ಖ್ಯಾತ ಹರಿಕತೆದಾಸರಾದ ಉಡುಪಿಯ ಅಂಬಾತನಯ ಮುದ್ರಾಡಿ. ಇವರು ನೆಡೆಸಿದ ಸ್ವಾರಸ್ಯಕರ ಸತಿ ಶಕ್ತಿ ಎಂಬ ಕಥಾ ಕಾಲಕ್ಷೇಪ ವಯೋ ಭೇಧವಿಲ್ಲದೇ ಎಲ್ಲರನ್ನೂ ರಂಜಿಸಿತು.
ಸಂಜೆಯಾಗುತ್ತಿದ್ದಂತೆ ಪ್ರತಿಭಾವಂತ ಸದಸ್ಯರು ಒಗ್ಗೂಡಿ ಹಲವು ಮನರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ನೀಡಿದರು.  ಡಾ ಸಿದ್ದಲಿಂಗಯ್ಯನವರ ಗೀತೆಗಳ ಗಾಯನ, ಭರತನಾಟ್ಯ, ಚಿಕ್ಕ ಸಾಮಾಜಿಕ ನಾಟಕ  ಇವೇ ಮುಂತಾದವು ಪ್ರಮುಖವಾಗಿದ್ದವು.

ಎರಡನೇ ದಿನ:
ಮೊದಲನೆಯ  ಸಾಹಿತ್ಯ ಗೋಷ್ಟಿಯಲ್ಲಿ ಭಾಗವಹಿಸಿದ ಡಾ. ಎಂ ರಂಗಸ್ವಾಮಿ- ಸರ್ವಜ್ಞ ಮತ್ತು ತಿರುವಳ್ಳುವರ್ ವಚನ ಮತ್ತು ಕಾವ್ಯದ ಸಾಮ್ಯತೆ ಮತ್ತು ಒಳತಿರುಳನ್ನೂ ಎಲ್ಲರ ಮುಂದೆ ಬಿಚ್ಚಿಟ್ಟರು.

ಹಿರಿಯ ಸಾಹಿತಿ ಡಾ. ಊರ್ಮಿಳಾ ಸತ್ಯನ್- ಆಳ್ವಾರ್ ಮತ್ತು ಹರಿದಾಸ ಸಾಹಿತ್ಯದ ಬಗ್ಗೆ ಉತ್ತಮ ಮಟ್ಟದ ಸಾಹಿತ್ಯ ವ್ಯಾಖ್ಯಾನವನ್ನೇ ನೆರೆದಿದ್ದವರಿಗೆ ನೀಡಿದರು. ಮೈಸೂರಿನ ರಾಮಶೇಷನ್- ವಚನಕಾರರ ಪ್ರಗತಿಪರ ಚಿಂತನೆಯ ಬಗ್ಗೆ ಸುಲಲಿತವಾಗಿ ಪರಿಚಯ ಮಾಡಿಸಿಕೊಟ್ಟರು.

ಈ ಎಲ್ಲ ಕಾರ್ಯಕ್ರಮಗಳ ಪ್ರಮುಖ ರೂವಾರಿಯಾಗಿದ್ದ ಮದ್ರಾಸ್ ವಿ.ವಿ.ಯ ಕನ್ನಡ ವಿಭಾಗದ ಮುಖ್ಯಸ್ತರೂ ಆದ ಡಾ. ತಮಿಳ್ ಸೆಲ್ವಿಯವರು ತಮ್ಮ ಎಂದಿನ ನಿರರ್ಗಳ  ವಾಗ್ಝರಿಯಲ್ಲಿ ತಮ್ಮ ಪಾಂಡಿತ್ಯಕ್ಕೆ ಅರ್ಹವಾದ ಹಳೆಗನ್ನಡದ ರನ್ನನ ಗಧಾಯುದ್ದದ ರಣರಂಗದ ಚಿತ್ರಣವನ್ನು ಸಭಿಕರ ಕಣ್ಣಿಗೆ ಕಟ್ಟುವಂತೆ ಮೂಡಿಸಿದರು.

ನಂತರ ಪುಟ್ಟೇಗೌಡರು ಸಂಧರ್ಭಕ್ಕೆ ಸೂಕ್ತವಾದ ಡಾ ಸಿದ್ಧಲಿಂಗಯ್ಯನವರ ಸಾಹಿತ್ಯದ ಕಿರು ಪರಿಚಯ ಮಾಡಿಕೊಡುತ್ತಾ ಅವರೊಂದಿಗಿದ್ದ ತಮ್ಮ ಒಡನಾಟ ಮತ್ತು ಅವರು ಕಂಡ ಅಧ್ಯಕ್ಷರ ಕ್ರಾಂತಿಕಾರಿ ಯೋಚಾನಲಹರಿಯ ಬಗ್ಗೆಯೂ ಸಾಕಷ್ಟು ಬೆಳಕು ಚೆಲ್ಲಿದರು.

-ನಾಗೇಶ್ ಕುಮಾರ್ ಸಿ. ಎಸ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com