ಮೋನಿಕಾಳದ್ದು ಮರ್ಯಾದಾ ಹತ್ಯೆ: ಮರ್ಯಾದೆಗೆ ಅಂಜಿ ಮಗಳನ್ನೇ ಕೊಂದ ತಂದೆ ಬಂಧನ

ಕಾಣೆಯಾಗಿದ್ದ ತಿಮ್ಮನಹೊಸೂರಿನ ಮೋನಿಕಾಳ ಸಾವಿನ ಪ್ರಕರಣ ರಹಸ್ಯ ಬಯಲಾಗಿದೆ...
ಮರ್ಯಾದಾ ಹತ್ಯೆ
ಮರ್ಯಾದಾ ಹತ್ಯೆ

ಮಂಡ್ಯ: ಕಾಣೆಯಾಗಿದ್ದ ತಿಮ್ಮನಹೊಸೂರಿನ ಮೋನಿಕಾಳ ಸಾವಿನ ಪ್ರಕರಣ ರಹಸ್ಯ ಬಯಲಾಗಿದೆ.

ಪ್ರೀತಿಸಿದವನ ಜತೆ ಹೋದ ಮೋನಿಕಾಳನ್ನು ಮರ್ಯಾದೆಗೆ ಅಂಜಿ ತಂದೆ ಮೋಹನ್ ಬಾವಮೈದುನರಾದ ಸುರೇಶ್ ಹಾಗೂ ರಾಮಕೃಷ್ಣ ಸೇರಿ ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಆಕೆಯ ಶವ ಸುಟ್ಟು ಹಾಕಿದ್ದಾರೆ ಈ ಸಂಬಂಧ ತಂದೆ ಮೋಹನ್, ಸುರೇಶ್ ರನ್ನು ಬಂಧಿಸಿದ್ದು, ರಾಮಕೃಷ್ಣ ತಲೆಮರೆಸಿಕೊಂಡಿರುವುದಾಗಿ ಎಸ್ ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಅನ್ಯ ಜಾತಿಯ ಯುವಕ ನರೇಂದ್ರ ಬಾಬು ಎಂಬಾತನನ್ನು ಮೋನಿಕಾ ಪ್ರೀತಿಸುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಮೋನಿಕಾಳಿಗೆ ಕುಟುಂಬದವರು ತಿಳಿ ಹೇಳಿದ್ದರು. ಆದರೂ ಆಕೆ ನರೇಂದ್ರ ಬಾಬು ಜತೆಗಿನ ಪ್ರೀತಿ ಮುಂದುವರಿಸಿದ್ದರಿಂದ ಊರಿನಲ್ಲಿ ಮರ್ಯಾದೆ ಉಳಿಸಿಕೊಳ್ಳಲು ಮಗಳ ಹತ್ಯೆ ನಡೆಸಿರುವುದಾಗಿ ತಂದೆಯೇ ತಪ್ಪೋಪ್ಪಿಕೊಂಡಿದ್ದಾರೆ.

ಮಾರ್ಚ್ 28ರಂದು 19 ವರ್ಷದ ಮೋನಿಕಾ ಕಾಣೆಯಾಗಿದ್ದಳು. ಮಾರ್ಚ್ 31ರಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿ ನರೇಂದ್ರ ಬಾಬು ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಮೋನಿಕಾ ಏ.1ರಂದು ತಂದೆ ಹಾಗೂ ಸೋದರ ಮಾವನ ಜತೆ ಠಾಣೆಗೆ ತೆರಳಿ, ತಾನು ಕೆಮಿಸ್ಟ್ರಿ ಮರುಪರೀಕ್ಷೆಗೆ ಸಿದ್ಧಗೊಳ್ಳಲು ಬೆಂಗಳೂರಿನಲ್ಲಿರುವ ಮಾವ ಗೋಪಾಲಕೃಷ್ಣ ಅವರ ಮನೆಗೆ ಹೋಗಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿ, ಮನೆಗೆ ಮರಳಿದ್ದಳು.

ಏ.3ರ ಮಧ್ಯರಾತ್ರಿ ಆಕೆ ಮತ್ತೆ ತನ್ನ ಪ್ರಿಯಕರನ ಜತೆ ಹೋಗಲು ಯತ್ನಿಸಿದ್ದನ್ನು ಗಮನಿಸಿದ ತಂದೆ, ತಾಯಿ, ಸೋದರ ಮಾವಂದಿರು ಅರ್ಧ ಗಂಟೆ ಕಾಲ ಮನವೊಲಿಸಲು ಯತ್ನಿಸಿ ವಿಫಲರಾದ ಬಳಿಕ, ನಿನಗೆ ಏನೇ ಕಷ್ಟಬಂದರೂ ನಮ್ಮ ಸಹಾಯ ಸಿಗದು. ಸತ್ತರೂ ನಾವು ಜವಾಬ್ದಾರರಲ್ಲ ಎಂದು ಬರೆದುಕೊಡುವಂತೆ ಪತ್ರ ಬರೆಸಿಕೊಂಡಿದ್ದಾರೆ.

ಆಕೆ ಪತ್ರ ಬರೆದುಕೊಟ್ಟ ನಂತರ ಮತ್ತೆ ಬುದ್ಧಿವಾದ ಹೇಳಲು ಯತ್ನಿಸಿ, ಆಕೆ ಒಪ್ಪದಿದ್ದಾಗ ಹಲ್ಲೆ ಮಾಡಿ ಕುತ್ತಿಗೆಯ ಮೇಲೆ ಕಾಲಿಟ್ಟು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮನೆಯ ಮುಂದಿನ ಗಸಗಸೆ ಮರಕ್ಕೆ ನೇಣು ಹಾಕಿ, ತಮ್ಮ ಮಗಳು ಪಿಯು ಪರೀಕ್ಷೆ ಸರಿಯಾಗಿ ಬರೆದಿಲ್ಲ ಎಂದು ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಗೋಳಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com