ಸರ್ಕಾರದ ಸಂಧಾನಕ್ಕೆ ಒಪ್ಪಿದ ಪ್ರೌಢಶಾಲಾ ಶಿಕ್ಷಕರು

ಮೌಲ್ಯಮಾಪನ ಧಿಕ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರೌಢಶಾಲೆ ಶಿಕ್ಷಕರ ಸಂಘದೊಂದಿಗೆ ಗುರುವಾರ ಸರ್ಕಾರ ನಡೆಸಿದ ಸಂಧಾನ ಮಾತುಕತೆ ಒಂದು ಹಂತದಲ್ಲಿ ಯಶಸ್ವಿಯಾಗಿದ್ದು, ಮೌಲ್ಯಮಾಪನಕ್ಕೆ ಮರಳುವುದಾಗಿ ಪ್ರೌಢಶಾಲಾ ಶಿಕ್ಷಕರು ಹೇಳಿದ್ದಾರೆ...
ಉಪನ್ಯಾಸಕರ ಪ್ರತಿಭಟನೆ (ಸಂಗ್ರಹ ಚಿತ್ರ)
ಉಪನ್ಯಾಸಕರ ಪ್ರತಿಭಟನೆ (ಸಂಗ್ರಹ ಚಿತ್ರ)

ಬೆಂಗಳೂರು: ಮೌಲ್ಯಮಾಪನ ಧಿಕ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರೌಢಶಾಲೆ ಶಿಕ್ಷಕರ ಸಂಘದೊಂದಿಗೆ ಗುರುವಾರ ಸರ್ಕಾರ ನಡೆಸಿದ ಸಂಧಾನ ಮಾತುಕತೆ ಒಂದು ಹಂತದಲ್ಲಿ  ಯಶಸ್ವಿಯಾಗಿದ್ದು, ಮೌಲ್ಯಮಾಪನಕ್ಕೆ ಮರಳುವುದಾಗಿ ಪ್ರೌಢಶಾಲಾ ಶಿಕ್ಷಕರು ಹೇಳಿದ್ದಾರೆ.

ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ನಿನ್ನೆ ಸಮ್ಮತಿ ಸೂಚಿಸಿದ್ದು, ನಾವು ಯಾವುದೇ ಪ್ರತಿಭಟನೆ ಮಾಡುವುದಿಲ್ಲ ಹಾಗೂ ಏಪ್ರಿಲ್ 17 ರಿಂದ ಮೌಲ್ಯಮಾಪನಕ್ಕೆ  ಹಾಜರಾಗುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಹೇಳಿದ್ದಾರೆ. ಇದೇ ವೇಳೆ ಕುಮಾರ್ ನಾಯಕ್ ವರದಿ ಜಾರಿಗೆ ನಮ್ಮ ಆಗ್ರಹ ಮುದುವರೆಯುತ್ತದೆ ಎಂದು ಎಚ್ಚರಿಕೆ  ನೀಡಿರುವ ಅವರು ಬರ ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರದ ಉದ್ದೇಶಿತ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಒಂದು ವೇತನ ಬಡ್ತಿ ಹಾಗೂ ಹಿಂದಿನ ವಿಶೇಷ ಭತ್ಯೆ ಆದೇಶ
ಉಪನ್ಯಾಸಕರಿಗೆ ಒಂದು ವೇತನ ಬಡ್ತಿ ಹಾಗೂ ಹಿಂದಿನ ವಿಶೇಷ ಭತ್ಯೆ ಮುಂದುವರಿಸುವ ಆದೇಶವನ್ನು ರಾಜ್ಯ ಸರ್ಕಾರ ಶುಕ್ರವಾರ ಹೊರಡಿಸಲಿದೆ ಎಂದು ತಿಳಿದುಬಂದಿದೆ. ಈ ಪ್ರಕಾರ ಪಿಯು  ಉಪನ್ಯಾಸಕರಿಗೆ 600 ರು.ಗಳಿಂದ 1900 ರು. ವೇತನ ಬಡ್ತಿ ಜತೆಗೆ 500 ರು. ವಿಶೇಷ ಭತ್ಯೆ ದೊರೆಯಲಿದೆ. ಹಾಗೆಯೇ ಪ್ರೌಢಶಾಲೆ ಸಹ ಶಿಕ್ಷಕರಿಗೆ 400 ರು.ಗಳಿಂದ 1300 ರು. ವೇತನ ಭತ್ಯೆ  ಹಾಗೂ 400 ರು. ವಿಶೇಷ ಭತ್ಯೆ ದೊರೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

ಕಿಮ್ಮನೆ ವಿರುದ್ಧ ಎ೦ಎಲ್‍ಸಿಗಳ ಆಕ್ರೋಶ
ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಪ್ರೌಢಶಾಲೆ ಸಹ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸಲು ಕುಮಾರ್ ನಾಯಕ್ ವರದಿ  ಅನುಷ್ಠಾನವಾಗಬೇಕಿದೆ. ಇದಕ್ಕಾಗಿ 190 ಕೋಟಿ ರೂ. ಅನುದಾನ ನೀಡಬೇಕು ಎಂದು ಸಿಎಂಗೆ ಸಚಿವ ಕಿಮ್ಮನೆ ಮಾ.೧೪ರಂದು ಪತ್ರ ಬರೆದಿದ್ದಾರೆ. ಇದಲ್ಲದೇ ಕಳೆದ ವರ್ಷದ ಪ್ರತಿಭಟನೆ  ಸಂದರ್ಭದಲ್ಲಿಯೂ ಸಿಎಂ ಹಾಗೂ ಸಚಿವರೇ ಭರವಸೆ ನೀಡಿದ್ದಾರೆ. ಆದರೆ ಈಗ ಕುಮಾರ್ ನಾಯಕ್ ವರದಿಯೇ ಅಪ್ರಸ್ತುತ ಎನ್ನುತ್ತಿದ್ದಾರೆ. ಕೂಡಲೇ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕು  ಎಂದು ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ರಾಮಚಂದ್ರೇಗೌಡ, ಅರುಣ್ ಶಹಾಪೂರ್, ಅಮರನಾಥ ಪಾಟೀಲ್ ಹಾಗೂ ಎಸ್.ವಿ.ಸಂಕನೂರ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com