ಬೆಂಗಳೂರು: ಪ್ರೀತಿಯಿಸಿದ ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಭಗ್ನ ಪ್ರೇಮಿಯೊಬ್ಬ ಫೇಸ್ ಬುಕ್ ಗೆ ವಿಡಿಯೋ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವೀವರ್ಸ್ ಕಾಲನಿ ನಿವಾಸಿ ಅರುಣ್ಕುಮಾರ್ (25) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು, ಆತ್ಮಹತ್ಯೆಗೆ ಯುವತಿ ಹಾಗೂ ಆಕೆ ಸಂಬಂಧಿಕರು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಆತ್ಮಹತ್ಯೆಗೆ ಕಾರಣರಾದ ಯುವತಿ ಫೋಷಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮೃತನ ಪೋಷಕರು ಹುಳಿಮಾವು ಠಾಣೆಗೆ ದೂರು ನೀಡಿದ್ದಾರೆ. ಮೃತ ಅರುಣ್ ಕುಮಾರ್ ಆತ್ಮಹತ್ಯೆಗೂ ಮುನ್ನ ತನ್ನ ಪ್ರೇಮ ವೈಫಲ್ಯ ಹಾಗೂ ಯುವತಿ ಸಂಬಂಧಿಗಳು ನೀಡಿದ ಕಿರುಕುಳದ ಬಗ್ಗೆ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿ ಫೆಸ್ಬುಕ್ಗೆ ಅಪ್ಲೋಡ್ ಮಾಡಿದ್ದಾನೆ.
ಮೃತ ಅರುಣ್ ತನ್ ಮನೆಯ ಸಮೀಪದಲ್ಲೇ ವಾಸವಿದ್ದ ಯುವತಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಹೀಗಾಗಿ ತಮ್ಮ ಮಗಳಿಗೆ ಅರುಣ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದರು. ಇದರಿಂದ ಬೇಸತ್ತ ಅರುಣ್, ಪ್ರೀತಿಸಿದ ಯುವತಿ ತನಗೆ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆಯೇ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಆತ್ಮಹತ್ಯೆಗೂ ಮುನ್ನ ವಿಡಿಯೋ ಚಿತ್ರೀಕರಣ ಮಾಡಿ ಫೇಸ್ ಬುಕ್ ಗೆ ಅಪ್ಲೋಡ್ ಮಾಡಿರುವ ಅರುಣ್, "ಇಷ್ಟು ದಿನ ನನ್ನ ಜತೆ ಓಡಾಡಿದ ನಿನಗೆ ಈಗ ನಾನು ಬೇಡವಾಗಿದ್ದೇನೆ. ಯಾವುದೇ ಕಾರಣಕ್ಕೂ ಪ್ರೀತಿಸಿ ಈ ರೀತಿ ಕೈ ಕೊಡಬೇಡಿ. ಯುವತಿಯ ಹತ್ತಿರದ ಸಂಬಂಧಿ ರೇಣುಕೇಶ್ ನನಗೆ ಕಿರುಕುಳ ನೀಡಿದ್ದ. ಹಲವು ಬಾರಿ ಹಲ್ಲೆ ಕೂಡ ಮಾಡಿಸಿದ್ದ. ಇದರಿಂದ ಮನನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದೇನೆ. ಆದರೆ, ರೇಣುಕೇಶ್ನನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ಆತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿಡಿಯೋದಲ್ಲಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾನೆ.
Advertisement