ಬೆಂಗಳೂರು: ವಿಹಾರಕ್ಕೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಶರಾವತಿ ನದಿಯ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಸಾಗರ ತಾಲ್ಲೂಕಿನ ಅಂಬರಗೋಡ್ಲು ಸಮೀಪದ ಶರಾವತಿ ಹಿನ್ನೀರಿನಲ್ಲಿ ಈ ಘಟನೆ ಸಂಭವಿಸಿದ್ದು, ಬೆಂಗಳೂರಿನ ವಿಜಯನಗರ ಪ್ರಥಮ ದರ್ಜೆ ಕಾಲೇಜಿನ ಪ್ರತಾಪ್ ಮತ್ತು ರಾಜೇಶ್ ಎಂಬ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರತಾಪ್ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿಯಾಗಿದ್ದು, ಮತ್ತೋರ್ವ ಮೃತ ವಿದ್ಯಾರ್ಥಿ ರಾಜೇಶ್ ಲಗ್ಗೆರೆ ಮೂಲದವನೆಂದು ತಿಳಿದುಬಂದಿದೆ.
ವಿಜಯ ನಗರ ಪ್ರಥಮ ದರ್ಜೆ ಕಾಲೇಜಿನ ಒಟ್ಟು 11 ವಿದ್ಯಾರ್ಥಿಗಳು ವಿಹಾರಕ್ಕೆ ತೆರಳಿದ್ದು, ಈ ವೇಳೆ ಶರಾವತಿ ಹಿನ್ನೀರಿನಲ್ಲಿ ವಿದ್ಯಾರ್ಥಿಗಳು ಈಜಲು ಇಳಿದಿದ್ದಾರೆ. ನೀರಿಗೆ ಇಳಿದ ಅಲ್ಪ ಸಮಯದಲ್ಲೇ ರಾಜೇಶ್ ಕಾಲು ಮಣ್ಣಿನಲ್ಲಿ ಸಿಲುಕಿ ನೆರವಿಗಾಗಿಗ ಮೊರೆ ಇಟ್ಟಿದ್ದ. ಈ ಹಿನ್ನಲೆಯಲ್ಲಿ ಈಜು ಬರುತ್ತಿದ್ದ ಪ್ರತಾಪ್ ಆತನನ್ನು ರಕ್ಷಿಸಲು ಹೋಗಿದ್ದಾನೆ. ರಾಜೇಶ್ ಪ್ರಾಣಭಯದಿಂದ ಪ್ರತಾಪ್ ನನ್ನು ಗಟ್ಟಿಯಾಗಿ ಹಿಡಿದ ಹಿನ್ನಲೆಯಲ್ಲಿ ಪ್ರತಾಪ್ ಈಜಲಾಗದೇ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮತ್ತು ವಿದ್ಯಾರ್ಥಿಗಳ ಸಹಪಾಠಿ ಅರುಣ್ ಹೇಳಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement