ಬೆಂಗಳೂರು: ಪಾಸ್ಪೋರ್ಟ್ ಆಕಾಂಕ್ಷಿ ಗಳ ಅರ್ಜಿ ಪರಿಶೀಲನೆ ಮಾಡುವ ಪದ್ಧತಿಯೇ ಅವೈಜ್ಞಾನಿಕವಾಗಿದ್ದು, ಅದನ್ನೂ ಕೂಡಲೇ ರದ್ದು ಪಡಿಸಬೇಕು ಎಂದು ನಿವೃತ್ತ ಡಿಜಿಪಿ ಡಾ.ಎಸ್.ಟಿ. ರಮೇಶ್ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಜನಾಗ್ರಹ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ "ಸರ್ಕಾರದಲ್ಲಿ ಭ್ರಷ್ಟಾಚಾರ: ಕಾನೂನು ಚೌಕಟ್ಟು ಹಾಗೂ ಆಡಳಿತಾತ್ಮಕ ಸವಾಲುಗಳು" ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಡಿಜಿಪಿ ಡಾ.ಎಸ್.ಟಿ. ರಮೇಶ್ ಅವರು "ಪಾಸ್ಪೋರ್ಟ್ ಆಕಾಂಕ್ಷಿಗಳ ಪೊಲೀಸ್ ವಿಚಾರಣೆ" ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ಮಾತನಾಡಿದ ಅವರು, "ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಮೂರು ಸಂದರ್ಭಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ಎಫ್ಆರ್ಐ ದಾಖಲು ಮಾಡುವುದು, ಸಾರಿಗೆ ನಿಯಮ ಉಲ್ಲಂಘನೆ ಹಾಗೂ ಪಾಸ್ಪೋರ್ಟ್ ವಿಚಾರಣೆ ವೇಳೆ ಭ್ರಷ್ಟಾಚಾರ ನಡೆಯುತ್ತದೆ. ಪೊಲೀಸ್ ಇಲಾಖೆಗೆ ವಿರುದ್ಧ ಬಂದಿರುವ ದೂರುಗಳ ಪೈಕಿ ಶೇ 14ರಷ್ಟು ಪಾಸ್ಪೋರ್ಟ್ ವಿಚಾರಣೆ ವೇಳೆ ನಡೆಯುವ ಭ್ರಷ್ಟಾಚಾರದ ಕುರಿತ ದೂರುಗಳಾಗಿದ್ದು, ಈ ವೇಳೆ ವ್ಯಾಪಕ ಭ್ರಷ್ಟಾಚಾರವಾಗುತ್ತದೆ ಎಂದು ಹೇಳಿದರು.
"ಪಾಸ್ಪೋರ್ಟ್ ಕಾಯ್ದೆ ಹಾಗೂ ನಿಯಮಗಳಲ್ಲಿ ಪೊಲೀಸ್ ವಿಚಾರಣೆಗೆ ಸಂಬಂಧಿಸಿದ ಸರಿಯಾದ ಮಾರ್ಗಸೂಚಿ ಇಲ್ಲದೇ ಇರುವುದು ಹಲವು ಸಮಸ್ಯೆಗಳಿಗೆ ಎಡೆ ಮಾಡಿ ಕೊಟ್ಟಿದೆ. ವಿಚಾರಣೆ ಎಂದರೆ ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು? ಯಾವುದನ್ನು ಪರಿಶೀಲನೆ ಮಾಡಬೇಕು ಎಂಬುದರ ಕುರಿತು ಸ್ಪಷ್ಟತೆಯೇ ಇಲ್ಲ. ಸಾಮಾನ್ಯ ವ್ಯಕ್ತಿಯ ಮನೆಗೆ ಪೊಲೀಸ್ ಕಾನ್ಸ್ಟೆಬಲ್ ಹೋಗುವುದು, ಅಲ್ಲಿ ಭಯದ ವಾತಾವರಣ ಸೃಷ್ಟಿಸುವುದು, ಆ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆಸುವುದು ಅನವಶ್ಯಕ’ ಎಂದು ರಮೇಶ್ ಅಭಿಪ್ರಾಯ ಪಟ್ಟರು.
"ಪೊಲೀಸ್ ವಿಚಾರಣೆ ಬಳಿಕ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಪ್ರಮಾಣಪತ್ರ ನೀಡುತ್ತಾರೆ. ಯಾವ ಆಧಾರದ ಮೇಲೆ ಹೀಗೆ ಪ್ರಮಾಣಪತ್ರ ನೀಡುತ್ತಾರೆ?" ಎಂದು ರಮೇಶ್ ಅವರು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕೇಂದ್ರ ಜಾಗೃತ ದಳದ ಆಯುಕ್ತ ಆರ್ ಶ್ರೀಕುಮಾರ್ ಸೇರಿದಂತೆ ಮತ್ತಿರರು ಪಾಲ್ಗೊಂಡಿದ್ದರು.
Advertisement