8 ತಿಂಗಳ ಸಹೋದರನ ಜೀವ ರಕ್ಷಣೆಗಾಗಿ ಸಹೋದರಿಯಿಂದ ದೇಹದ ಅಮೂಲ್ಯ ಅಂಗದಾನ!

ಯಕೃತ್ತಿನ ಸೋಂಕಿಗೆ ಒಳಗಾಗಿ ಜೀವನ್ಮರಣ ಪರಿಸ್ಥಿತಿಯಲ್ಲಿ ಹೋರಾಡುತ್ತಿರುವ 8 ತಿಂಗಳ ಸಹೋದರನಿಗಾಗಿ 18 ವರ್ಷದ ಯುವತಿಯೊಬ್ಬಳು ತನ್ನ ದೇಹದ ಅಮೂಲ್ಯ ಅಂಗವನ್ನೇ ದಾನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ..
8 ತಿಂಗಳ ಸಹೋದರ ಕಾರ್ತಿಕ್ ನೊಂದಿಗೆ ಸಹೋದರಿ ಪಲ್ಲವಿ (ಟಿಎನ್ ಐಇ ಚಿತ್ರ)
8 ತಿಂಗಳ ಸಹೋದರ ಕಾರ್ತಿಕ್ ನೊಂದಿಗೆ ಸಹೋದರಿ ಪಲ್ಲವಿ (ಟಿಎನ್ ಐಇ ಚಿತ್ರ)
Updated on

ಬೆಂಗಳೂರು: ಯಕೃತ್ತಿನ ಸೋಂಕಿಗೆ ಒಳಗಾಗಿ ಜೀವನ್ಮರಣ ಪರಿಸ್ಥಿತಿಯಲ್ಲಿ ಹೋರಾಡುತ್ತಿರುವ 8 ತಿಂಗಳ ಸಹೋದರನಿಗಾಗಿ 18 ವರ್ಷದ ಯುವತಿಯೊಬ್ಬಳು ತನ್ನ ದೇಹದ ಅಮೂಲ್ಯ  ಅಂಗವನ್ನೇ ದಾನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪಿತ್ತಜನಕಾಂಗ ವೈಫ‌ಲ್ಯದಿಂದ ಬಳಲುತ್ತಿದ್ದ 8 ತಿಂಗಳ ಕಾರ್ತಿಕೇಯ ಎಂಬ ಗಂಡು ಮಗುವಿಗೆ ಬೇರೊಂದು ಪಿತ್ತಜನಕಾಂಗವನ್ನು ಕಸಿ ಮಾಡುವ ಮೂಲಕ ನಗರದ ಮಣಿಪಾಲ ಆಸ್ಪತ್ರೆಯ  ವೈದ್ಯರ ತಂಡ ಅತ್ಯಂತ ವಿರಳ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಮಾರಿಷಸ್‌ ಮೂಲದ ದಂಪತಿಯ ಹಬಿಲೆನ್‌ ಎಂಬ ಶಿಶುವಿಗೆ ಆಸ್ಪತ್ರೆಯ  ಪಿತ್ತಜನಕಾಂಗ ಕಸಿ ವಿಭಾಗದ ಮುಖ್ಯಸ್ಥ ಡಾ| ರವಿಚಂದ್‌ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಪಿತ್ತಜನಕಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗುವಿಗೆ ಅಂಗಾಂಗ ದಾನ ಮಾಡಿದ್ದು ಮಗುವಿನ 19 ವರ್ಷದ ಸಹೋದರಿ ಪಲ್ಲವಿ ಎಂಬ ಯುವತಿಯೇ ಎಂಬುದು ವಿಶೇಷ. ಹುಟ್ಟಿದ 5 ತಿಂಗಳಲ್ಲೇ  ಮಗುವಿಗೆ ಪಿತ್ತಜನಕಾಂಗ ಸಮಸ್ಯೆಗೊಳಗಾಗಿದ್ದು, ಪಿತ್ತಜನಕಾಂಗದಲ್ಲಿ 'ಬಿಲಿರುಬಿನ್‌' ಎಂಬ ದ್ರವ ಸ್ರವಿಸಲು ಸಾಧ್ಯವಾಗದೆ ಅಂಗಾಂಗಕ್ಕೆ ಹಾನಿಯಾಗಿತ್ತು. ಇಂಥಹ ವಿಷಮ ಪರಿಸ್ಥಿತಿಯಲ್ಲಿ  ದಾನಿಯಿಂದ ಪಿತ್ತಜನಕಾಂಗ ಪಡೆದು ಕಸಿ ಶಸ್ತ್ರಚಿಕಿತ್ಸೆ ನಡೆಸದೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಡಾ| ರವಿಚಂದ್‌ ಹೇಳಿದ್ದಾರೆ ಅಲ್ಲದೆ ಇದನ್ನು ಶಿಶುವಿನ ಕುಟುಂಬದವರಿಗೆ ವಿವರಿಸಿದಾಗ  ಮಗುವಿನ 19 ವರ್ಷದ ಸಹೋದರಿ ಪಲ್ಲವಿ ಅವರು ಸ್ವತಃ ತಾವೇ ಪಿತ್ತಜನಕಾಂಗದ ದಾನಿಯಾಗಲು ಮುಂದೆ ಬಂದರು. ಸಮಗ್ರ ಪರೀಕ್ಷೆ ಮತ್ತು ಕಾನೂನು ಕ್ರಮಗಳನ್ನು ಅನುಸರಿಸಿದ ಬಳಿಕ  ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಅವರು ಹೇಳಿದರು.

ಕೇವಲ 8 ಕೆ.ಜಿ. ತೂಕವಿದ್ದ ಶಿಶುವಿಗೆ 250 ಗ್ರಾಂನ ಪಿತ್ತಜನಕಾಂಗದ ಕಸಿಗೆ ಸತತ 8 ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಭಾರತದಲ್ಲಿ ಇಂತಹ ಶಿಶುಗಳಿಗೆ ಅಂಗಕಸಿ ನಡೆಸಿ ಯಶಸ್ವಿ  ಫ‌ಲಿತಾಂಶ ಕಾಣುವ ಹೆಚ್ಚಿನ ಸಂಖ್ಯೆಯ ಕೇಂದ್ರಗಳು ಇಲ್ಲ. ಅದೃಷ್ಟವಶಾತ್‌ ಮಣಿಪಾಲ್‌ ಆಸ್ಪತ್ರಯಲ್ಲಿ ಪಿತ್ತಜನಕಾಂಗ ರೋಗಶಾಸ್ತ್ರಜ್ಞರು, ಪಿತ್ತಜನಕಾಂಗ ಕಸಿ ಶಸ್ತ್ರಕ್ರಿಯಾ ತಜ್ಞರು ಮತ್ತು  ತೀವ್ರ ನಿಗಾ ತಜ್ಞರ ಅನುಭವಿ ತಂಡವಿರುವುದರಿಂದ ಈ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಯಿತು ಎಂದು ಆಸ್ಪತ್ರೆಯ ಪಿತ್ತಜನಕಾಂಗ ರೋಗ ತಜ್ಞ ಡಾ| ಒಲಿತ್‌ ಸೆಲ್ವನ್‌ ಹೇಳಿದರು.

ಲಿವರ್‌ ವೈಫ‌ಲ್ಯದಿಂದ ಬಳಲುವ ಮಕ್ಕಳ ಜೀವ ಉಳಿಸುವ ಲಿವರ್ ಪ್ಲಾಂಟೇಷನ್
8 ತಿಂಗಳ ಕಾರ್ತಿಕೇಯನಿಗೆ ಒದಗಿ ಬಂದಿದ್ದ ಸಮಸ್ಯೆ ಅತ್ಯಂತ ವಿರಳ ಹಾಗೂ ಸಂಕೀರ್ಣವಾದದ್ದಾಗಿದ್ದು, ಮಗುವಿನ ಸಹೋದರಿಯೇ ಪಿತ್ತಜನಕಾಂಗದ ಭಾಗವನ್ನು ದಾನ ಮಾಡಲು  ಮುಂದಾಗಿದ್ದು ಮನಮುಟ್ಟುವ ಪ್ರಸಂಗ. ಆಸಕ್ತಿದಾಯಕ ವಿಷಯವೆಂದರೆ ಸಹೋದರಿಯಿಂದ ತೆಗೆಯಲಾಗಿರುವ ಪಿತ್ತಜನಕಾಂಗದ (ಲಿವರ್‌) ಸಣ್ಣ ಭಾಗ ತನ್ನ ಸಂಪೂರ್ಣ ಗಾತ್ರದ ಶೇ.90ರಷ್ಟು  ಪ್ರಮಾಣಕ್ಕೆ ಬೆಳೆಯುವಂತದ್ದಾಗಿದೆ. ಜನರಲ್ಲಿ ಅದರಲ್ಲೂ ಮಕ್ಕಳಲ್ಲಿ ಪಿತ್ತಜನಕಾಂಗದ ವೈಫ‌ಲ್ಯದ ಸಂದರ್ಭದಲ್ಲಿ ಇದು ಜೀವ ಉಳಿಸುವ ಕ್ರಮವಾಗಿದೆ. ದಾನಿ ಪಲ್ಲವಿ ಉತ್ತಮವಾಗಿ  ಚೇತರಿಸಿಕೊಂಡಿದ್ದು, ಶೀಘ್ರವೇ ಸಾಮಾನ್ಯ ಜೀವನ ನಡೆಸಬಹುದು ಎಂದು ಡಾ| ಒಲಿತ್‌ ಸೆಲ್ವನ್‌ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com