80 ವರ್ಷದ ಮಾಜಿ ಶಾಸಕರಿಗೆ 9 ವರ್ಷದ ಪುತ್ರ; ಕ್ಯಾನ್ಸರ್ ನಿಂದ ಬಳಲಿ ಸಾವನ್ನಪ್ಪಿದ!

ಜನಪ್ರತಿನಿಧಿ ಸೋಗಿನಲ್ಲಿರುವ ಮಾಜಿ ಹಿರಿಯ ಶಾಸಕರೊಬ್ಬರು ಸರ್ಕಾರದ ಸವಲತ್ತು ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜನಪ್ರತಿನಿಧಿ ಸೋಗಿನಲ್ಲಿರುವ ಮಾಜಿ ಹಿರಿಯ ಶಾಸಕರೊಬ್ಬರು ಸರ್ಕಾರದ ಸವಲತ್ತು ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.

ಸರ್ಕಾರದ ಹಣ ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನವಿದ್ದು, 80 ವರ್ಷದ ಮಾಜಿ ಶಾಸಕರೊಬ್ಬರು ಸರ್ಕಾರ ನೀಡುತ್ತಿರುವ ಸವಲತ್ತು ಪಡೆಯಲು ಇಲ್ಲದ ಪುತ್ರನನ್ನು ಹುಟ್ಟುಹಾಕಿ, ಆತ ಕ್ಯಾನ್ಸರ್ ನಿಂದ ಬಳಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ಸರ್ಕಾರದಿಂದ ಹಣ ಪಡೆಯಲು ಯತ್ನಿಸಿದ್ದಾರೆ. ಆದರೆ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದಾಗ ಮಾಜಿ ಶಾಸಕರ ಕೃತ್ಯ ಬಯಲಾಗಿದೆ.

ಏನಿದು ಘಟನೆ?
ಮಾಜಿ ಶಾಸಕರಿಗೆ ಮತ್ತು ಸಚಿವರಿಗೆ ರಾಜ್ಯ ಸರ್ಕಾರ ಒಂದಷ್ಟು ಸವಲತ್ತುಗಳನ್ನು ನೀಡುತ್ತಿದ್ದು, ಈ ಪೈಕಿ ಮಾಜಿ ಶಾಸಕರ ಕುಟುಂಬಸ್ಥರಿಗೆ ಅನಾರೋಗ್ಯ ವಿಮೆ ಕೂಡ ನೀಡಿದೆ. ಅದರಂತೆ ಸುಮಾರು 80 ವರ್ಷದ ಹಿರಿಯ ಮಾಜಿ ಶಾಸಕರೊಬ್ಬರು ಸರ್ಕಾರದ ಈ ಸವಲತ್ತು ಪಡೆಯಲು ಅದಿತ್ಯಾ ಎಂಬ ಹೆಸರಿನ ಇಲ್ಲದ ಪುತ್ರನನ್ನು ಹುಟ್ಟುಹಾಕಿ ಆತ ಕ್ಯಾನ್ಸರ್ ನಿಂದ ಬಳಲಿ ಸಾವನ್ನಪ್ಪಿದ್ದಾನೆ ಎಂದು ಸುಳ್ಳುದಾಖಲೆ ಸೃಷ್ಟಿಸಿ ಅಧಿಕಾರಿಗಳಿಗೆ ನೀಡಿದ್ದಾರೆ. ಮಾಜಿ ಶಾಸಕರು ನೀಡಿದ ದಾಖಲೆಗಳ ಪ್ರಕಾರ ಅವರ ಪುತ್ರನ ವಯಸ್ಸು 9 ವರ್ಷವಾಗಿದ್ದು, ಅವರ ವಯಸ್ಸು 80 ವರ್ಷವಂತೆ. ಹಾಗಾದರೆ ಅವರ 71ನೇ ವಯಸ್ಸಿನಲ್ಲಿ ಪುತ್ರ ಜನಿಸಿದನೇ ಎಂಬ ಅನುಮಾನ ಅಧಿಕಾರಿಗಳಿಗೆ ಹುಟ್ಟಿದ್ದು, ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿದಾಗ ಮಾಜಿ ಶಾಸಕರ ರಹಸ್ಯ ಬಯಲಾಗಿದೆ. ಅವರು ನೀಡಿದ್ದ ವಿಳಾಸ ಸೇರಿದಂತೆ ಎಲ್ಲ ದಾಖಲೆಗಳು ನಕಲಿ ಎಂದು ಸಾಬೀತಾಗಿದೆ.

ಹೀಗಾಗಿ ಪ್ರಸ್ತುತ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇನ್ನು ಈ ಹಿಂದೆಯಷ್ಟೇ ಸ್ಪೀಕರ್ ಕೆಬಿ ಕೋಳಿವಾಡ ಅವರು ಮಾಜಿ ಶಾಸಕರು ಹಾಗೂ ಸಚಿವರಿಗೆ ಸೆಕ್ಷನ್ 12 (3)ರ ಅಡಿಯಲ್ಲಿ ನೀಡಲಾಗುತ್ತಿರುವ ಸವಲತ್ತುಗಳ ಕುರಿತ ಕಾನೂನನ್ನು ಕಠಿಣಗೊಳಿಸಬೇಕು ಎಂದು ಹೇಳಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಕೂಡ ಬರೆದಿದ್ದು, ಸವಲತ್ತು ದುರ್ಬಳಕೆ ಕುರಿತು ಎಚ್ಚರಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಈ ಪ್ರಕರಣ ಬಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com