ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರು ಸಹೋದರರ ಮೇಲೆ ತಲ್ವಾರ್ನಿಂದ ಹಲ್ಲೆ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಗೋಪನಕೊಪ್ಪದ ಅಮರ ಕಾಲೋನಿಯಲ್ಲಿ ನಡೆದಿದೆ.
ಬುಧವಾರ ಮಧ್ಯರಾತ್ರಿ ತೌಸಿಫ್ ಕರಡಿ ಎನ್ನುವರ ಮನೆ ಮೇಲೆ ದಾಳಿ ಮಾಡಿದ ಎಂಟರಿಂದ ಹತ್ತು ಜನರಿದ್ದ ತಂಡ ತಲ್ವಾರ್ ಹಾಗೂ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದೆ ಎನ್ನಲಾಗಿದೆ.
ತೌಸಿಫ್ ಮೇಲೆ ಹಲ್ಲೆ ಮಾಡುತ್ತಿರುವುದನ್ನು ನೋಡಿದ ಸಹೋದರರಾದ ಆಜಾದ್ ಮತ್ತು ವಾಸೀಂ ಬಿಡಿಸಲು ಹೋಗಿದ್ದಾರೆ. ಆಗ ಅವರ ಮೇಲೆಯೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಸಹೋದರರು ಗಂಭೀರವಾಗಿ ಗಾಯಗೊಂಡಿದ್ದರೆ, ತೌಸಿಫ್ ಬೆಳಗಾವಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾನೆ.
ಇನ್ನು ತೀವ್ರವಾಗಿ ಗಾಯಗೊಂಡಿರುವ ವಾಸೀಂನನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇನ್ನೊಬ್ಬ ಸಹೋದರ ಆಜಾದ್ಗೆ ಹುಬ್ಬಳ್ಳಿಯಲ್ಲಿ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗುತ್ತಿದೆ. ಸದ್ದಾಂ, ಸೈಯದ್, ಇಸ್ಮಾಯಿಲ್, ಮೌಲಾಲಿ ಸೇರಿದಂತೆ 8ರಿಂದ 10 ಜನರ ಗುಂಪು ಈ ಮೂವರ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದೆ ಎನ್ನಲಾಗಿದೆ.
ಸದ್ದಾಂ ಹಾಗೂ ತೌಸಿಫ್ ಇಬ್ಬರು ಸಂಬಂಧಿಗಳಾಗಿದ್ದು ಪಾರಿವಾಳ ಹಾರಾಟ ಸ್ಪರ್ಧೆ ಸಂಬಂಧ ಇವರಿಬ್ಬರ ಕುಟುಂಬದ ನಡುವೆ ಹಳೇ ದ್ವೇಷವಿತ್ತು ಎನ್ನಲಾಗಿದೆ. ಅದಲ್ಲದೇ ಕೆಲ ದಿನಗಳ ಹಿಂದೆ ಈ ವೈಷಮ್ಯ ವಿಕೋಪಕ್ಕೆ ತಿರುಗಿತ್ತು.
Advertisement