ಕಲಬುರ್ಗಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ, ಸಜೀವವಾಗಿ ದಹಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ದಿಗ್ಗಾವಿಯಲ್ಲಿ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.
ಹತ್ಯೆಯಾದ ವ್ಯಕ್ತಿಗಳನ್ನು ಜೇವರ್ಗಿ ತಾಲ್ಲೂಕು ಬಿರಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಾರೆಡ್ಡಿ (42) ಹಾಗೂ ಆಂದೋಲಾದ ವ್ಯವಸಾಯ ಸ್ವ ಸಹಾಯ ಸಂಘದ ಸದಸ್ಯ ಸಿದ್ದನಗೌಡ(60) ಎಂದು ಗುರುತಿಸಲಾಗಿದ್ದು, ಇಬ್ಬರೂ ಜೇವರ್ಗಿ ತಾಲ್ಲೂಕು ಮಲ್ಲಾ(ಕೆ) ಗ್ರಾಮದವರು ಮತ್ತು ಸಂಬಂಧದಲ್ಲಿ ಮಾವ–ಅಳಿಯಂದಿರು.
ಕಳೆದ ನವೆಂಬರ್ 24 ರಂದು ಈ ಇಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಈ ಬಗ್ಗೆ ಸಿದ್ದನಗೌಡ ಅವರ ಪುತ್ರ ಬಸನಗೌಡ ಅವರು ನ. 27 ರಂದು ಕಲಬುರ್ಗಿಯ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
‘ಒಂದು ವಾರದ ಬಳಿಕ ಕೆಲವು ಗ್ರಾಮಸ್ಥರು ನೀಡಿದ ಸುಳಿವು ಆಧರಿಸಿ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದಾಗ ಅಪಹರಣವಾಗಿದ್ದ ಇಬ್ಬರು ವ್ಯಕ್ತಿಗಳನ್ನು ಸುಟ್ಟು ಹಾಕಿರುವುದು ತಿಳಿದು ಬಂದಿದೆ’ಎಂದು ಪೊಲೀಸರು ತಿಳಿಸಿದ್ದಾರೆ.