ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಚೋರರು ಅಪಘಾತದಲ್ಲಿ ಮೃತಪಟ್ಟರು

ಯುವಕನೊಬ್ಬನಿಂದ ಮೊಬೈಲ್ ಕಸಿದು ಬೈಕ್ ನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಯುವಕನೊಬ್ಬನಿಂದ ಮೊಬೈಲ್ ಕಸಿದು ಬೈಕ್ ನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ನ ಇಸ್ಕಾನ್ ದೇವಾಲಯದ ಎದುರು ಈ ಘಟನೆ ನಡೆದಿದೆ. ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಗುಜರಾತ್ ಮೂಲದ ಇಕ್ಲಾಲ್ ಎಂಬ ಯುವಕನಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ದರೋಡೆ ಮಾಡಿದ ಕಳ್ಳರು ವೇಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಇಸ್ಕಾನ್ ಮುಂಭಾಗ ನಿಂತಿದ್ದ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದು, ಸಾವನ್ನಪ್ಪಿದ್ದಾರೆ.
ರಾಜಾಜಿನಗರ ಸಮೀಪದ ಶಿವನಹಳ್ಳಿಯ ಅಭಿಲಾಷ್(19) ಹಾಗೂ ಸಂತೋಷ್(20) ಮೃತಪಟ್ಟ ದರೋಡೆಕೋರರು. ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದು, ಅಭಿಲಾಷ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 
ಬೆಂಗಳೂರಿನಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಇಕ್ಲಾಲ್ ಕೆಲಸದ ನಿಮಿತ್ತ ಗುಜರಾತ್ ಗೆ ಹೋಗಿದ್ದ ಅವರು, ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಬಸ್ ಇಳಿದಿದ್ದಾರೆ. ಈ ವೇಳೆ ಎರಡು ಪಲ್ಸರ್ ಬೈಕ್ ಗಳಲ್ಲಿ ನಿಂತಿದ್ದ ನಾಲ್ವರು ದರೋಡೆಕೋರರು ಆತನಿಗೆ ಚಾಕು ತೋರಿಸಿ ಬೆದರಿಸಿ, ಎರಡು ಮೊಬೈಲ್ ಮತ್ತು ರು.1.500 ಹಣವಿದ್ದ ಪರ್ಸ್ ದೋಚಿದ್ದಾರೆ. ಇಬ್ಬರು ಕಳ್ಳರು ಅಪಘಾತದಲ್ಲಿ ಸಾವನಪ್ಪಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ಕೊಲೆ ಯತ್ನ, ಬೆದರಿಕೆ, ದರೋಡೆ ಪ್ರಕರಣ ದಾಖಲಿಸಿದ್ದು, ಮತ್ತಿಬ್ಬರು ದರೋಡೆಕೋರರನ್ನು ಪತ್ತೆ ಹಚ್ಚಲಾಗುವುದು ಎಂದು ಸುಬ್ರಮಣ್ಯನಗರ ಪೊಲೀಸ್ ಇನ್ಸ್ ಪೆಕ್ಟರ್ ಗೋವಿಂದ್ ರಾಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com