ಮತ್ತೆ ಸುವರ್ಣಯುಗಕ್ಕೆ ಕಾಲಿಡಲಿದೆಯೇ ಸಾಂಸ್ಕೃತಿಕ ಕಲೆ ಯಕ್ಷಗಾನ?

ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ ಮತ್ತು ವಿಶಿಷ್ಟ ವೇಷ-ಭೂಣಗಳನ್ನೊಳಗೊಂಡ ಸ್ವತಂತ್ರವಾದ ಶಾಸ್ತ್ರೀಯ ಕಲೆಯೇ ಈ ಯಕ್ಷಗಾನ. ಕರ್ನಾಟಕದ ಕರಾವಳಿಯ ಗಂಡುಮೆಟ್ಟಿನ...
ಮಂಗಳೂರಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನ
ಮಂಗಳೂರಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನ

ಮಂಗಳೂರು: ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ ಮತ್ತು ವಿಶಿಷ್ಟ ವೇಷ-ಭೂಣಗಳನ್ನೊಳಗೊಂಡ ಸ್ವತಂತ್ರವಾದ ಶಾಸ್ತ್ರೀಯ ಕಲೆಯೇ ಈ ಯಕ್ಷಗಾನ. ಕರ್ನಾಟಕದ ಕರಾವಳಿಯ ಗಂಡುಮೆಟ್ಟಿನ ಕಲೆ ಎಂಬ ಪ್ರಸಿದ್ಧಿಯನ್ನು ಯಕ್ಷಗಾನ ಪಡೆದುಕೊಂಡಿದೆ.

ಆಧುನಿಕ ತಂತ್ರಜ್ಞಾನ ಯುಗ ಅಸ್ತಿತ್ವಕ್ಕೆ ಬರುತ್ತಿದ್ದಂತೆ ತನ್ನ ಮೌಲ್ಯವನ್ನು ಕಳೆದುಕೊಂಡಿದ್ದ ಯಕ್ಷಗಾನ ಇದೀಗ ಮತ್ತೆ ತನ್ನದೇ ಆದ ಸುವರ್ಣಯುಗಕ್ಕೆ ಕಾಲಿಡಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಲು ಆರಂಭಿಸಿದೆ.

ಕೆಲ ದಿನಗಳ ಹಿಂದಷ್ಟೇ ಸಿರಿಬಾಗಿಲು ವೆಂಕಪ್ಪಯ್ಯ ಸಂಸ್ಕೃತಿ ಪ್ರತಿಷ್ಠಾನ ಮಂಗಳೂರಿನಲ್ಲಿ ಟೌನ್ ಹಾಲ್ ನಲ್ಲಿ ಜಗಜತ್ತಿ ಬಚಾ ಎಂಬ ಯಕ್ಷಗಾನವೊಂದನ್ನು ನಡೆಸಿದೆ. ಈ ಯಕ್ಷಗಾನ ನೃತ್ಯವನ್ನು ಬೆಳಗ್ಗಿನಿಂದಲೇ ಆರಂಭ ಮಾಡಲಾಗಿತ್ತು. ಹೊರಾಂಗಣದಲ್ಲಿ ಕೂತು ಯಕ್ಷಗಾನವನ್ನು ನೋಡುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಶೇ.70 ಮಂದಿ ಯಕ್ಷಗಾನದ ಮನರಂಜನೆಯ ಸವಿಯನ್ನು ಸವಿದಿದ್ದರು.

ಕಾರ್ಯಕ್ರಮದಲ್ಲಿ ಒಬ್ಬ ಪ್ರೇಕ್ಷಕನಿಗೆ ಒಂದೊಂದು ದರ್ಜೆಯಂತೆ ಟಿಕೆಟ್ ದರವನ್ನು ರು.500, ರು.300 ಮತ್ತು ರು.200 ರಷ್ಟುನ್ನು ನಿಗದಿ ಪಡಿಸಲಾಗಿತ್ತು. ಈ ಹಿಂದೆ ಏರ್ಪಡಿಸಲಾಗುತ್ತಿದ್ದ ಸಾಕಷ್ಟು ಯಕ್ಷಗಾನ ಕಾರ್ಯಕ್ರಮಗಳನ್ನು ಉಚಿತವಾಗಿ ಆಯೋಜಿಸಲಾಗುತ್ತಿತ್ತು. ಆದರೆ, ಸಂಕಷ್ಟದಲ್ಲಿ ಸಿಲುಕಿರುವ ಕಾರ್ಯಕ್ರಮ ಆಯೋಜಕರು ಹಣವನ್ನು ತೆತ್ತು ಕಾರ್ಯಕ್ರಮ ವೀಕ್ಷಿಸುವಂತೆ ಟಿಕೆಟ್ ಗಳನ್ನು ನಿಯೋಜಿಸಿದ್ದರು. ಆದರೆ, ಇದಕ್ಕೆ ಪ್ರೇಕ್ಷಕರಿಂದ ಧನಾತ್ಮಕ ಪ್ರತಿಕ್ರಿಯೆ ಬಂದಿರುವುದು ಆಯೋಜಕರು ನಿಟ್ಟುಸಿರು ಬಿಡುವಂತಾಗಿದೆ.

ಈ ರೀತಿಯ ಟ್ರೆಂಡ್ ಮುಂದುವರೆದಿದ್ದೇ ಆದರೆ, ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಯಕ್ಷಗಾನ ಕಾರ್ಯಕ್ರಮಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವಂತಾಗುತ್ತದೆ. ರಾಜ್ಯದ ಹೆಗ್ಗಳಿಕೆಗೆ ಕಾರಣವಾಗಿರುವ ಯಕ್ಷಗಾನ ಕೂಡ ಮತ್ತೆ ಸುವರ್ಣಯುಗಕ್ಕೆ ಕಾಲಿಡಲು ಸಹಾಯಕವಾಗುತ್ತದೆ. ಯಕ್ಷಗಾನ ಕಲೆಯತ್ತ ಯುವಕರು ಮುಖ ಮಾಡುವುದೂ ಕೂಡ ಹೆಚ್ಚಾಗುತ್ತದೆ.

ಯಕ್ಷಗಾನದಲ್ಲಿ ಪ್ರಸಿದ್ಧಿ ಪಡೆದಿರುವ ಕಲಾವಿದ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ ಮಾತನಾಡಿ, ಯಕ್ಷಗಾನ ಮತ್ತೆ ಸುವರ್ಣಯುಗದತ್ತ ಕಾಲಿಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ತಜ್ಞ ಪ್ರಭಾಕರ್ ಜೋಷಿಯವರು ಮಾತನಾಡಿ, ಕೇವಲ ಒಂದು ಪ್ರದರ್ಶನದಿಂದ ಯಕ್ಷಗಾನ ಸುವರ್ಣಯುಗಕ್ಕೆ ಕಾಲಿಡಲು ಸಾಧ್ಯವಿಲ್ಲ. ಕೆಲ ಪ್ರಸಿದ್ಧಿ ಪಡೆದಿರುವ ಕಲಾವಿದರು ಎಲ್ಲಿಯೇ ಹೋಗಿ ಪ್ರದರ್ಶನ ನೀಡಿದರು ಅಲ್ಲಿ ಅವರ ಅಭಿಮಾನಿಗಳು ಪ್ರದರ್ಶನವನ್ನು ನೋಡುತ್ತಾರೆ. ಯಕ್ಷಗಾನದಲ್ಲಿ ಕೆಲ ಬದಲಾವಣೆಗಳನ್ನು ತಂದರೆ ಈ ಕಲೆ ಪ್ರಸಿದ್ಧಿ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com