ಮರ ಕಡಿಯಲು ಹೋಗಿ ಹಾವು ಕಡಿದರು!

ನಗರದ ಪ್ರಮುಖ ದೇವಾಲಯವೊಂದರ ಆವರಣದಲ್ಲಿರುವ ಮರವನ್ನು ಕಡಿಯುವ ವೇಳೆ ಮರದ ಪೊಟರೆಯಲ್ಲಿದ್ದ ನಾಗರಹಾವೊಂದು ಯಂತ್ರಕ್ಕೆ ಸಿಕ್ಕಿ ಸತ್ತ ಘಟನೆ ಜೆ.ಪಿ. ಪಾರ್ಕ್ ವಾರ್ಡ್‌ನ ಮುತ್ಯಾಲನಗರದಲ್ಲಿ ನಡೆದಿದೆ.
ಮರ ಕಡಿಯುವ ವೇಳೆ ಸಿಕ್ಕು ಸತ್ತ ಹಾವು (ಸಂಗ್ರಹ ಚಿತ್ರ)
ಮರ ಕಡಿಯುವ ವೇಳೆ ಸಿಕ್ಕು ಸತ್ತ ಹಾವು (ಸಂಗ್ರಹ ಚಿತ್ರ)

ಬೆಂಗಳೂರು: ನಗರದ ಪ್ರಮುಖ ದೇವಾಲಯವೊಂದರ ಆವರಣದಲ್ಲಿರುವ ಮರವನ್ನು ಕಡಿಯುವ ವೇಳೆ ಮರದ ಪೊಟರೆಯಲ್ಲಿದ್ದ ನಾಗರಹಾವೊಂದು ಯಂತ್ರಕ್ಕೆ ಸಿಕ್ಕಿ ಸತ್ತ ಘಟನೆ ಜೆ.ಪಿ. ಪಾರ್ಕ್  ವಾರ್ಡ್‌ನ ಮುತ್ಯಾಲನಗರದಲ್ಲಿ ನಡೆದಿದೆ.

ಜೆ.ಪಿ. ಪಾರ್ಕ್ ವಾರ್ಡ್‌ನ ಮುತ್ಯಾಲನಗರದ ಮುತ್ಯಾಲಮ್ಮ ದೇವಸ್ಥಾನ ಆವರಣದಲ್ಲಿ ಈ ಘಟನೆ ನಡೆದಿದ್ದು, ದೇವಾಲಯದ ಆವರಣದಲ್ಲಿರುವ ಸುಮಾರು 200 ವರ್ಷಗಳಷ್ಟು ಹಳೆಯ  ಅರಳಿಮರ ಕತ್ತರಿಸುವಾಗ ಯಂತ್ರಕ್ಕೆ ಸಿಕ್ಕಿ ನಾಗರಹಾವೊಂದು ಸತ್ತಿದೆ. ಸ್ಥಳೀಯರು ಹೇಳಿರುವಂತೆ ಸುತ್ತಮುತ್ತಲ ಪ್ರದೇಶದ ಜನರು ಈ ಹಾವನ್ನು ಹಾಗೂ ಹಾವು ವಾಸವಿದ್ದ ಮರವನ್ನು  ಸಾಕಷ್ಟು ವರ್ಷಗಳಿಂದ ಪೂಜಿಸುತ್ತಿದ್ದರು. ಆದರೆ ದೇವಾಲಯದ ಜಾಗವನ್ನು ಅತಿಕ್ರಮಿಸಲು ಸ್ಥಳೀಯ ಕಾರ್ಪೋರೇಟರ್ ಹುನ್ನಾರ ನಡೆಸಿ ಮರವನ್ನು ಕಡಿದು ಹಾಕಿದ್ದಾರೆ. ಈ ವೇಳೆ ಹಾವು ಕೂಡ  ಸತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯೆ ಮಮತಾ ಹಾಗೂ ಅವರ ಪತಿ ವಾಸುದೇವ್ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಇನ್ನು ಈ  ಬಗ್ಗೆ ಸ್ಪಷ್ಟನೆ ನೀಡಿರುವ ದೇವಾಲಯದ ಆಡಳಿತಾಧಿಕಾರಿ ಕೂಡ ಆಗಿರುವ ವಾಸುದೇವ್ ಅವರು, "ನೂರಾರು ವರ್ಷಗಳಷ್ಟು ಹಳೆಯದಾದ ಮರದ ಕೊಂಬೆಗಳು ಶಿಥಿಲಗೊಂಡಿದ್ದವು. ಕೆಲವೇ  ದಿನಗಳಲ್ಲಿ ದೇವಸ್ಥಾನದ ವಾರ್ಷಿಕೋತ್ಸವ ನಡೆಯಲಿದ್ದು, ಈ ವೇಳೆ ಭಕ್ತರ ಮೇಲೆ ಕೊಂಬೆ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಹೀಗಾಗಿ ಅದನ್ನು ಕಡಿಸುವಂತೆ ಕಾರ್ಪೊರೇಟರ್‌ಗೆ  ದೂರು ಬಂದಿತ್ತು ಎಂದು ಹೇಳಿದ್ದಾರೆ.

ಮರದ ಕೊಂಬೆ ತೆರವುಗೊಳಿಸಲು ಸ್ಥಳೀಯ ಕಾರ್ಪೋರೇಟರ್ ಮಮತಾ ಅವರು ಪಾಲಿಕೆ ಅರಣ್ಯ ವಿಭಾಗಕ್ಕೆ ಪತ್ರ ಬರೆದಿದ್ದರು. ಅದರಂತೆ ಜೂನ್ 29ರಂದು ವಾಸುದೇವ್ ಅವರು, ಪಾಲಿಕೆ  ಸಿಬ್ಬಂದಿಗಳ ಮೂಲಕ ಕೊಂಬೆಗಳನ್ನು ಯಂತ್ರ ಮೂಲಕ ಕತ್ತರಿಸುತ್ತಿದ್ದಾಗ ಪೊಟರೆಯಲ್ಲಿದ್ದ ಹಾವು ಯಂತ್ರಕ್ಕೆ ಸಿಲುಕಿ ಮೂರು ತುಂಡಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ನೆರೆದಿದ್ದ ಜನರು  ಈ ಘಟನೆಯ ವಿಡಿಯೋ ಮಾಡಿದ್ದರು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗೆ ಮತ್ತು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ವಿಷಯ ತಿಳಿದ ರಾಜರಾಜೇಶ್ವರಿನಗರ ಉಪ ವಲಯಾರಣ್ಯಾಧಿಕಾರಿ ಶಿವಪ್ಪ ಜುಲೈ 4ರಂದು ವಾಸುದೇವ್, ಪಾಲಿಕೆ ನೌಕರ ಶಿವಣ್ಣ ಮತ್ತು ಇತರರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com