ಬೆಂಗಳೂರು: ಇತ್ತೀಚೆಗಷ್ಟೇ ಬಿಲ್ಜಿಯಂ ಪ್ರವಾಸಕ್ಕೆ ತೆರಳಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ಸುತ್ತ ಎದ್ದಿದ್ದ ಹಲವು ಊಹಾಪೋಹಗಳಿಗೆ ಅವರ ಗೆಳೆಯ ಎಂದು ಹೇಳಿಕೊಂಡಿರುವ ಅನಂತ್ ನಾರಾಯಣ್ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಬೆಲ್ಜಿಯಂನಲ್ಲಿ ರಾಕೇಶ್ ಸಿದ್ದರಾಮಯ್ಯ ಅವರು ಅನಾರೋಗ್ಯಕ್ಕೀಡಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ವ್ಯಾಪಕ ಊಹಾಪೋಹಗಳು ಹರಿದಾಡಿದ್ದವು. ಇದಕ್ಕೆ ಪೂರಕವೆಂಬಂತೆ ರಾಕೇಶ್ ಸಿದ್ದರಾಮಯ್ಯ, ಕಿರುತೆರೆಯ ಓರ್ವ ನಟಿ ಹಾಗೂ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿ ರೋಹನ್ ಗೌಡ ಸೇರಿದಂತೆ ಅವರ ಸ್ನೇಹಿತರ ಗುಂಪು ತೆಗೆಸಿಕೊಂಡಿದ್ದ ಚಿತ್ರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬೆಲ್ಜಿಯಂ ನಲ್ಲಿರುವ ಖ್ಯಾತ ಟುಮಾರೋ ಲ್ಯಾಂಡ್ ಕ್ಲಬ್ ನಲ್ಲಿ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು ರಾಕೇಶ್ ಸಿದ್ದರಾಮಯ್ಯ ಸ್ನೇಹಿತರೊಂದಿಗೆ ತೆರಳಿದ್ದರು. ಅಲ್ಲಿ ರಾಕೇಶ್ ಮತ್ತು ಗೆಳೆಯರು ಗುಂಪು ಮೊದಲ ದಿನದಂದು ತೆಗೆದ ಚಿತ್ರ ಇದು ಎಂದು ಸುದ್ದಿ ಹಬ್ಬಿತ್ತು.
ಇದೀಗ ಈ ಎಲ್ಲ ಊಹಾಪೋಹಗಳಿಗೆ ತೆರೆಎಳೆಯುವುದಕ್ಕಾಗಿ ರಾಕೇಶ್ ಅವರ ಸ್ನೇಹಿತ ಎಂದು ಹೇಳಿಕೊಂಡಿರುವ ಅನಂತ್ ನಾರಾಯಣ್ ಎಂಬುವವರು ಫೇಸ್ ಬುಕ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ಫೋಟೋ ಅಸಲಿಯಲ್ಲ. ಅದು ಬೆಲ್ಜಿಯಂ ಬೂಮ್ ನಗರದಲ್ಲಿ ತೆಗೆದ ಚಿತ್ರವೇ ಅಲ್ಲ. ಇದು ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿರುವ ಬಾರ್ ರಿಪಬ್ಲಿಕ್ ರೆಸ್ಟೋರೆಂಟ್ ನಲ್ಲಿ ತೆಗೆದ ಚಿತ್ರ'. ರಾಕೇಶ್ ಸಿದ್ದರಾಮಯ್ಯ ಅವರು ನನ್ನ ಆಪ್ತ ಗೆಳೆಯ ಹಾಗೂ ಹಿತ ಬಯಸುವವರು, ಅಂದು ನಾವು ಗೆಳೆಯರೆಲ್ಲರೂ ಊಟ ಮಾಡಿ ತೆಗೆಸಿಕೊಂಡ ಚಿತ್ರವದು. ಆದರೆ, ಇದು ಬೆಲ್ಜಿಯಂನಲ್ಲಿ ತೆಗೆದ ಚಿತ್ರ ಎಂದು ಹೇಳಿ ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ಹಂಚಲಾಗುತ್ತಿದೆ. ಇದೆಲ್ಲವೂ ಸುಳ್ಳು ಸುದ್ದಿ. ನಾನು ಬೆಂಗಳೂರಿನಲ್ಲಿಯೇ ಇದ್ದೇನೆ ಹಾಗೂ ನನಗೂ ಟುಮಾರೋ ಲ್ಯಾಂಡ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅನಂತ್ ನಾರಾಯಣ್ ಹೇಳಿದ್ದಾರೆ.
"ರಾಕೇಶ್ ಅವರನ್ನು ಕಳೆದುಕೊಂಡ ದುಃಖದಲ್ಲಿ ನಾವಿದ್ದೇವೆ. ಅಂಥ ವ್ಯಕ್ತಿ ನಮಗೆ ಮತ್ತೆ ಸಿಗಲ್ಲ, ನಾವು ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
Advertisement