ಬೆಂಗಳೂರಲ್ಲಿ ಮತ್ತೆ ಒಂಟಿ ಮಹಿಳೆ ಹತ್ಯೆ: ರಾಡ್ ನಿಂದ ತಲೆ ಒಡೆದು ಕೊಲೆ

ಒಂಟಿಯಾಗಿದ್ದ ವೃದ್ಧೆಯೊಬ್ಬರನ್ನು ತಲೆಗೆ ರಾಡ್‌ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ರಾಜರಾಜೇಶ್ವರಿ ನಗರದ ರಾಘವೇಂದ್ರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂಟಿಯಾಗಿದ್ದ ವೃದ್ಧೆಯೊಬ್ಬರನ್ನು ತಲೆಗೆ ರಾಡ್‌ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ರಾಜರಾಜೇಶ್ವರಿ ನಗರದ ರಾಘವೇಂದ್ರ ಸ್ವಾಮಿ ಮಠದ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಲಕ್ಷ್ಮಿರಾಜ್ಯಮ್ (65) ಕೊಲೆಯಾದ ಮಹಿಳೆಯಾಗಿದ್ದಾರೆ. ಒಂಟಿಯಾಗಿದ್ದ ಲಕ್ಷ್ಮಿ ಅವರ ಮನೆಗೆ ಮಧ್ಯರಾತ್ರಿ ನುಗ್ಗಿರುವ ದುಷ್ಕರ್ಮಿಗಳು ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದ್ದು, ಮನೆಯಲ್ಲಿನ ಯಾವುದೇ ವಸ್ತುಗಳನ್ನು ದೋಚಿರುವುದು ಕಂಡುಬಂದಿಲ್ಲ. ಕೆಲವು ವರ್ಷಗಳ ಹಿಂದೆ ಪತಿ ಸತ್ಯಮೂರ್ತಿ ಮೃತಪಟ್ಟ ನಂತರ ಲಕ್ಷ್ಮಿ ಅವರು ಒಂಟಿಯಾಗಿ ವಾಸಿಸುತ್ತಿದ್ದರು.

ಲಕ್ಷ್ಮಿ ಅವರ ಮಗ ಕೋರಮಂಗಲದಲ್ಲಿ ವಾಸಿಸುತ್ತಿದ್ದರೆ, ಮಗಳು ವಿವಾಹವಾಗಿ ವಿಶಾಖಪಟ್ಟಣದಲ್ಲಿದ್ದಾರೆ. ಆಂಧ್ರ ಮೂಲದ ಈ ದಂಪತಿ ಹೆಚ್ಚುಕಾಲ ಬೆಂಗಳೂರಿನಲ್ಲೇ ಕಳೆದಿದ್ದರು. ಬೆಳಿಗ್ಗೆ 8 ಗಂಟೆಯಾದರೂ ಲಕ್ಷ್ಮಿ ಅವರು ಮನೆ ಬಾಗಿಲು ತೆಗೆಯದಿದ್ದರಿಂದ ಆತಂಕಗೊಂಡ ಅಕ್ಕಪಕ್ಕದವರು ಸರಿಯಾಗಿ ಹಾಕದಿದ್ದ ಬಾಗಿಲನ್ನು ನೂಕಿ ನೋಡಿದಾಗ ಕೊಲೆಯಾಗಿರುವುದು ಕಂಡುಬಂದಿದೆ.

ತುಂಬಾ ಶಿಸ್ತಿನ ಮಹಿಳೆಯಾಗಿದ್ದ ಲಕ್ಷ್ಮಿ, ಕೆಲ ದಿನಗಳ ಹಿಂದೆ ಮನೆ ಕೆಲಸದವಳನ್ನು ತೆಗೆದು ಹಾಕಿದ್ದರು. ಪ್ರತಿದಿನ ರಾತ್ರಿ 8 ಗಂಟೆಗೆ ಬಾಗಿಲುಹಾಕಿ ಒಳಗಡೆ ಸೇರಿಕೊಳ್ಳುತ್ತಿದ್ದರು. ಕಾಲು ನೋವಿನಿಂದ ಬಳಲುತ್ತಿದ್ದ ಅವರು ಕಳೆದ ಕೆಲ ದಿನಗಳಿಂದ ಮೊದಲಿನಂತೆ ಇರದೇ ಸುಸ್ತಾಗಿರುತ್ತಿದ್ದರು ಎಂದು ನೆರೆ ಹೊರೆಯವರು ತಿಳಿಸಿದ್ದಾರೆ.

ಕೋರಮಂಗಲದಿಂದ ಆವರ ಪುತ್ರ ಕಿರಣ್ ಲಕ್ಷ್ಮಿಗೆ ವಿಮಾನದ ಟಿಕೆಟ್ ಬುಕ್ ಮಾಡಿ ಕಳುಹಿಸಿದ್ದರು. ಕಿರಣ್ ತನ್ನ ಕುಟುಂಬಸ್ಥರ ಜೊತೆ ಆಸ್ಟ್ರೇಲಿಯಾಗೆ ತೆರಳುತ್ತಿದ್ದ ಹಿನ್ನೆಲೆಯಲ್ಲಿ ವಿಶಾಖಪಟ್ಟಣದಲ್ಲಿರುವ ಮಗಳ ಮನೆಗೆ ತೆರಳುವಂತೆ ಕಿರಣ್ ಹೇಳಿದ್ದರು.

ಘಟನಾ ಸ್ಥಳಕ್ಕೆ ಡಿಸಿಪಿ ಅಜಯ್ ಹಿಲೋರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಪ್ರಕರಣ ದಾಖಲಿಸಿರುವ ರಾಜರಾಜೇಶ್ವರಿ ನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com