ಬೆಂಗಳೂರು; ಅನಾರೋಗ್ಯದಿಂದ ಬೇಸತ್ತು 25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಗರದ ದೊಮ್ಮಲೂರುನಲ್ಲಿ ಮಂಗಳವಾರ ನಡೆದಿದೆ.
ಕಿರಣ್ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕೋಲಾರ ಮೂಲದ ಈ ಯುವಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ದೊಮ್ಮಲೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ತನ್ನ ಮೂವರು ಗೆಳೆಯರೊಂದಿಗೆ ಜೀವನ ನಡೆಸುತ್ತಿದ್ದನು. ಆದರೆ. ಪ್ರತೀ ದಿನ ಒಂದಲ್ಲ ಒಂದು ನೋವು ಕಾಡುತ್ತಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಬೇಸರಗೊಂಡಿದ್ದಾನೆ.
ಇದರಿಂದಾಗಿ ನಿನ್ನೆ ರಾತ್ರಿ ತೀವ್ರವಾಗಿ ನೊಂದಿದ್ದ ಯುವಕ ರಾತ್ರಿ 9.30 ಸುಮಾರಿಗೆ ತನ್ನ ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ಗಂಟೆಗಳ ನಂತರ ಗೆಳೆಯನೊಬ್ಬ ಕೊಠಡಿಗೆ ಬಂದು ಬಾಗಿಲು ತಟ್ಟಿದ್ದಾನೆ. ಈ ವೇಳೆ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಗಿಲು ಮುರಿದು ಒಳ ಹೋದಾಗ ಕಿರಣ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಗಾಬರಿಗೊಂಡ ಆತ ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸುವ ವೇಳೆ ಕಿರಣ್ ಬರೆದಿರುವ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನಲ್ಲಿ ಕಿರಣ್ ನನಗೆ ದೃಷ್ಟಿ ದೋಷವಿದೆ. ಅಲ್ಲದೆ, ಎದೆ ನೋವು ಆಗಾಗ ಬರುತ್ತಿರುತ್ತದೆ. ನನ್ನಿಂದ ಬೇರೆಯವರಿಗೆ ತೊಂದರೆಯಾಗಬಾರದು. ನನ್ನ ಸಾವಿಗೆ ಯಾರು ಜವಾಬ್ದಾರರಲ್ಲ ಎಂದು ಹೇಳಿಕೊಂಡಿದ್ದಾನೆ. ಪ್ರಸ್ತುತ ಪ್ರಕರಣ ಇಂದಿರಾನಗರದಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement