ಕದ್ದ ಮೊಬೈಲ್ ನಿಂದ ಗೆಳತಿಗೆ ಕರೆ ಮಾಡಿ ಜೈಲು ಸೇರಿದ
ಬೆಂಗಳೂರು: ಕಳ್ಳನೊಬ್ಬ ಮೊಬೈಲ್ ಕದ್ದು ಅದೇ ಮೊಬೈಲ್ ನಿಂದ ತನ್ನ ಗೆಳತಿಗೆ ಕರೆ ಮಾಡಿ ಸಿಕ್ಕಿಬಿದ್ದಿದ್ದಾನೆ.
ಆತ ಸಿಕ್ಕಿಬೀಳುವುದರ ಜೊತೆ ಆತನೊಂದಿಗಿದ್ದ ನಾಲ್ವರು ಸಹ ಪೊಲೀಸರ ಅಥಿತಿಗಳಾಗಿದ್ದಾರೆ. ಬಂಧಿತ ಆರೋಪಿಗಳನ್ನು ದಿಲೀಪ್ ಕುಮಾರ್, ತೇಜಸ್, ಭರತ್, ಅರ್ಜುನ್, ಶಶಿಕುಮಾರ್ ಹಾಗು ಪುನೀತ್ ಎಂದು ಗುರಿತಿಸಲಾಗಿದೆ. ಕಳ್ಳತನ ಮಾಡುತ್ತಿದ್ದ ಈ ನಾಲ್ವರು ಅವಿವಾಹಿತರು ವಾಸಿಸುತ್ತಿದ್ದ ಮನೆಗಳ ಮೇಲೆ ಕಣ್ಣಿತ್ತಿರುತ್ತಿದ್ದರು. ಮನೆ ಮುಂಭಾಗದಲ್ಲಿರುತ್ತಿದ್ದ ಚಪ್ಪಲಿಗಳ ಸಂಖ್ಯೆಯನ್ನು ಪರಿಶೀಲಿಸಿ ಮನೆಗೆ ನುಗ್ಗಿ ಚಾಕುವಿನಿಂದ ಬೆದರಿಸಿ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಬಸವೇಶ್ವರ ನಗರದಲ್ಲಿ ಮೂರು ಮೊಬೈಲ್ ಫೋನ್ ಗಳನ್ನು ಕದ್ದಿದ್ದರು, ಆರೋಪಿಗಳ ಪೈಕಿ ಒಬ್ಬನಾಗಿದ್ದ ಅರ್ಜುನ್ ಕದ್ದ ಮೊಬೈಲ್ ಗಳಲ್ಲಿ ಒಂದರಿಂದ ತನ್ನ ಗೆಳತಿಗೆ ಮಿಸ್ಡ್ ಕಾಲ್ ನೀಡಿದ್ದಾನೆ. ಮತ್ತೆ ತನ್ನ ಗೆಳತಿ ಅದೇ ನಂಬರ್ ಗೆ ಕರೆ ಮಾಡಿದಾಗ ಈ ನಂಬರ್ ಗೆ ಕರೆ ಮಾಡದಂತೆ ಹೇಳಿದ್ದಾನೆ. ಈ ವೇಳೆಗೆ ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನವಾಗಿದ್ದ ಮೊಬೈಲ್ ಗೆ ಕರೆ ಮಾಡಿದ್ದ ಯುವತಿಯ ಐಎಂಇಐ ನಂಬರ್ ನ್ನು ಪರಿಶೀಲನೆ ನಡೆಸಿದ ಪೊಲೀಸರು, ಯುವತಿಯನ್ನು ವಿಚಾರಣೆ ನಡೆಸಿದ್ದಾರೆ ಆದರೆ ಮೊಬೈಲ್ ಕಳ್ಳಾತನವಾಗಿರುವ ಬಗ್ಗೆ ತಿಳಿಯದ ಯುವತಿ, ಅರ್ಜುನ್ ನ ನಂಬರ್ ಹಾಗೂ ವಿವರಗಳನ್ನು ನೀಡಿದ್ದಾಳೆ. ಕಾಲ್ ರೆಕಾರ್ಡ್ ಡಾಟಾ ಆಧರಿಸಿ ತನಿಖೆ ನಡೆಸಿದ ಪೊಲೀಸರು ಅರ್ಜುನ್ ನ ನಂಬರ್ ಲಗ್ಗೆರೆ ಸರ್ಕಾರಿ ಶಾಲೆ ಬಳಿ ಬಳಕೆಯಾಗುತ್ತಿರುವುದನ್ನು ಪತ್ತೆ ಹಚ್ಚಿ, ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ