ಎನ್ ಜಿಟಿ (ಸಂಗ್ರಹ ಚಿತ್ರ)
ಎನ್ ಜಿಟಿ (ಸಂಗ್ರಹ ಚಿತ್ರ)

ಒತ್ತುವರಿದಾರರಿಗೆ ಎನ್‌ಜಿಟಿ ನಡುಕ: ಕೆರೆಯಂಗಳದ ಕಟ್ಟಡ ನೆಲಸಮಕ್ಕೆ ಆದೇಶ

ಬೆಂಗಳೂರಿನ ಒತ್ತುವರಿದಾರರಿಗೆ ಹಸಿರು ನ್ಯಾಯಾಧಿಕರಣದ ತೀರ್ಪು ನಡುಕು ಹುಟ್ಟಿಸಿದ್ದು, ಕೆರೆಯಂಗಳ ಮತ್ತು ರಾಜಕಾಲುವೆಯ ನಿಷೇಧಿತ ವಲಯ (ಬಫರ್ ಝೋನ್)ದಲ್ಲಿರುವ ಎಲ್ಲ ಕಟ್ಟಡಗಳನ್ನು ಮುಲಾಜಿಲ್ಲದೇ ನೆಲಸಮಗೊಳಿಸಬೇಕು ಎಂದು ತೀರ್ಪು ನೀಡಿದೆ...

ಬೆಂಗಳೂರು: ಬೆಂಗಳೂರಿನ ಒತ್ತುವರಿದಾರರಿಗೆ ಹಸಿರು ನ್ಯಾಯಾಧಿಕರಣದ ತೀರ್ಪು ನಡುಕು ಹುಟ್ಟಿಸಿದ್ದು, ಕೆರೆಯಂಗಳ ಮತ್ತು ರಾಜಕಾಲುವೆಯ ನಿಷೇಧಿತ ವಲಯ (ಬಫರ್ ಝೋನ್)ದಲ್ಲಿರುವ  ಎಲ್ಲ ಕಟ್ಟಡಗಳನ್ನು ಮುಲಾಜಿಲ್ಲದೇ ನೆಲಸಮಗೊಳಿಸಬೇಕು ಎಂದು ತೀರ್ಪು ನೀಡಿದೆ.

ಎನ್ ಜಿಟಿ ತೀರ್ಪಿನಿಂದಾಗಿ ಇದೀಗ ಕೆರೆ ಮತ್ತು ರಾಜಾಕಾಲುವೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ, ಆಪಾರ್ಟ್ ಮೆಂಟ್, ವಾಣಿಜ್ಯ ಕಟ್ಟಡಗನ್ನು ನಿರ್ಮಾಣ ಮಾಡಿದ್ದ ಭೂ  ಒತ್ತವರಿದಾರರ ಭೀತಿಗೆ ಕಾರಣವಾಗಿದೆ. ಕೆರೆಯಂಗಳದ 75 ಮೀ. ಹಾಗೂ ರಾಜಕಾಲುವೆ ಸುತ್ತಮುತ್ತ 50 ಮೀ. ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಈಗಾಗಲೇ  ನಿರ್ಮಾಣವಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂಬ ನ್ಯಾಯಾಧಿಕರಣದ ಮಹತ್ವದ ತೀರ್ಪಿನಿಂದ ನಗರದಲ್ಲಿ ಸ್ಥಗಿತಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ  ಚುರುಕುಗೊಂಡಿದೆ.

ಕೆರೆಗಳ ಒತ್ತುವರಿ ಕುರಿತು ಸಮೀಕ್ಷೆ ನಡೆಸುವ ಸಲುವಾಗಿ ಸರ್ಕಾರ ರಚಿಸಿರುವ ಕೆ.ಬಿ. ಕೋಳಿವಾಡ್ ನೇತೃತ್ವದ ಸದನ ಸಮಿತಿ, ಇಲ್ಲಿಯವರೆಗೆ ನಗರದ ಕೆರೆಗಳ ಸಮೀಕ್ಷೆ ನಡೆಸಿ,  ಒತ್ತುವರಿದಾರರಿಗೆ ತಹಸೀಲ್ದಾರ್ ಮುಖಾಂತರ ನೋಟಿಸ್ ಜಾರಿ ಮಾಡಿದೆ. ಆದರೆ, ಇಲ್ಲಿಯವರೆಗೆ ಕೆರೆಯಂಗಳ ಹಾಗೂ ರಾಜಕಾಲುವೆಯ ನಿಷೇಧಿತ ವಲಯದ ಒತ್ತುವರಿಗೆ ಸರ್ವೇ  ನಡೆಸಿರಲಿಲ್ಲ. ಈಗ ತೀರ್ಪಿನಿಂದ ಎಚ್ಚೆತ್ತಿರುವ ಸಮಿತಿಯು ನಿಷೇಧಿತ ವಲಯದ ಕುರಿತು ಸರ್ವೇ ನಡೆಸಿ ವರದಿ ಪಡೆಯಲು ಮುಂದಾಗಿದೆ. ಇನ್ನೊಂದೆಡೆ ಬಿಬಿಎಂಪಿ ರಾಜಕಾಲುವೆಯ  ನಿಷೇಧಿತ ವಲಯದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಇದರಿಂದ ಈ ವಲಯದಲ್ಲಿ ಇರುವ ನೂರಾರು ಮನೆಗಳು ಬಹುಮಹಡಿ ಕಟ್ಟಡಗಳ ನಿವಾಸಿಗಳು ಅನಿವಾರ್ಯವಾಗಿ ಜಾಗ  ಖಾಲಿ ಮಾಡಬೇಕಿದೆ.

ಈ ಬಗ್ಗೆ ಮಾತನಾಡಿರುವ ಬೆಂಗಳೂರು ನಗರದ ಉಪ ಆಯುಕ್ತ ಎಲ್ ಸಿ ನಾಗರಾಜ್ ಅವರು, ಹಸಿರು ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ಯಾವುದೇ ಕ್ಷಣದಲ್ಲಿ ಭೂ ಒತ್ತವರು  ಕಾರ್ಯಾಚರಣೆ ನಡೆಯಬಹುದು. ಪ್ರಸ್ತುತ ನಾವು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದು, ಅದರಲ್ಲಿರುವ ಮ್ಯಾಪ್ ನ ಅಳತೆ ಮತ್ತು ಮಾಹಿತಗಳ ಪ್ರಕಾರ ಕೆರೆ ಮತ್ತು ರಾಜಾಕಾಲುವೆ  ಒತ್ತುವರಿಯಾಗಿದ್ದರೆ ಮುಲಾಜಿಲ್ಲದೇ ಅವುಗಳನ್ನು ತೆರವುಗೊಳಿಸುತ್ತೇವೆ. ಸಂಬಂಧ ಇಲಾಖೆ ಆ ಕಟ್ಟಡಗಳ ಪರವಾನಗಿಯನ್ನೇ ರದ್ದುಗೊಳಿಸಬಹುದು. ಸರ್ಕಾರಿ ಸ್ವಾಮ್ಯದ ಬಿಡಿಎ, ಬಿಎಂಆರ್  ಡಿಎ ಮತ್ತು ಬಿಬಿಎಂಪಿ ಸಂಸ್ಥೆಗಳಿಂದಲೂ ಒತ್ತವರಿಯಾದ ಕುರಿತು ಮಾಹಿತಿಗಳು ಲಭ್ಯವಾಗಿದೆ. ಇವುಗಳನ್ನು ಕೂಡ ಯಾವುದೇ ಮುಲಾಜಿಲ್ಲದೇ ತೆರವು ಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಸಂಸ್ಥೆಗಳಿಂದಲೂ ಒತ್ತುವರಿ
ಮೂಲಗಳ ಪ್ರಕಾರ ನಗರದ ಒಟ್ಟು ಕೆರೆಗಳ ಒತ್ತುವರಿಯಲ್ಲಿ ಕಾಲು ಭಾಗ ಎಂದರೆ 2,254 ಎಕರೆಯನ್ನು ಸರ್ಕಾರಿ ಸಂಸ್ಥೆಗಳೇ ಒತ್ತುವರಿ ಮಾಡಿಕೊಂಡಿವೆ. ಬಿಡಿಎ (375.13 ಎಕರೆ),  ಬಿಬಿಎಂಪಿ (167.2 ಎಕರೆ), ಕೊಳಚೆ ಪ್ರದೇಶಕ್ಕೆ (48.6 ಎಕರೆ), ರಸ್ತೆಗೆ (500.15 ಎಕರೆ), ಪ್ರಾರ್ಥನಾ ಸ್ಥಳಗಳಿಗೆ (9.27 ಎಕರೆ), ಅರಣ್ಯಕ್ಕೆ (101.14 ಎಕರೆ), ಸ್ಮಶಾನಕ್ಕೆ (17.32  ಎಕರೆ), ಶಾಲೆಗಳಿಗೆ (13.24 ಎಕರೆ), ಸಾರಿಗೆ ಸಂಸ್ಥೆಗಳಿಗೆ (73.11 ಎಕರೆ) ಹಾಗೂ ಇತರೆ ಇಲಾಖೆಗಳು (947.38 ಎಕರೆ ) ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿವೆ. ಈ ಸಂಸ್ಥೆಗಳಿಗೆ  ನೋಟಿಸ್ ನೀಡಲಾಗಿದೆಯಾದರೂ, ಅವುಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಬಂದಿಲ್ಲ. ಶೇ. 60 ಖಾಸಗಿ ಒತ್ತುವರಿದಾರರು ನೋಟಿಸ್‌ಗೆ ಉತ್ತರಿಸಿದ್ದಾರೆ. ಆದರೆ, ಸರ್ಕಾರಿ ಸಂಸ್ಥೆಗಳು  ಮಾತ್ರ ಸಮಿತಿಯ ನೋಟಿಸ್‌ಗೆ ಕ್ಯಾರೆ ಎಂದಿಲ್ಲ. ಇದರಿಂದ ವರದಿ ತಯಾರಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನೋಟಿಸ್ ಗೆ ಕ್ಯಾರೆ ಅನ್ನದ ಬಿಡಿಎ
ಅಗರ, ಸಾಣೆ­ಗುರುವನಹಳ್ಳಿ, ಚಿಕ್ಕಮಾರೇನಹಳ್ಳಿ, ಕಾಚರಕನ­ಹಳ್ಳಿ, ಗೆದ್ದಲಹಳ್ಳಿ, ಚಳ್ಳಕೆರೆ ಮೊದಲಾದ ಗ್ರಾಮಗಳ ಕೆರೆಯಂಗಳವನ್ನೇ ಬಿಡಿಎ ಬಡಾವಣೆ ಮಾಡಿಬಿಟ್ಟಿದೆ. 18 ಕೆರೆಗಳ ಜಾಗದಲ್ಲಿ  ನಿವೇಶನ ರಚಿಸಿರುವುದಾಗಿ ಬಿಡಿಎ ಉಪಲೋಕಾಯುಕ್ತರಿಗೆ  ಕಳೆದ ವರ್ಷ ವರದಿ ಸಲ್ಲಿಸಿದೆ. ಜೆ.ಸಿ.ನಗರದ ದೊರೆಸ್ವಾಮಿ ಕೆರೆ ಒತ್ತುವರಿ ಮಾಡಿಕೊಂಡು ಬಿಡಿಎ, ಡಾಲರ್ಸ್ ಕಾಲೋನಿ  ನಿರ್ಮಿಸಿದೆ. ಅದರಲ್ಲಿ ನಿವೇಶನ ಪಡೆದವರಲ್ಲಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕಾರಣಿಗಳು ಮತ್ತು ಪ್ರಮುಖ ನಟರೂ ಇದ್ದಾರೆ.  ಬಿಡಿಎ ಒಟ್ಟು 41 ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಸುಮಾರು 10 ಸಾವಿರ ನಿವೇಶನಗಳನ್ನು ಹಂಚಿದೆ ಎಂದು ಸದನ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ ಈ ಹಿಂದೆ ತಿಳಿಸಿದ್ದರು.   ಅದರಂತೆ ಬಿಡಿಎ 375 ಎಕರೆ ಕಬಳಿಸಿದ್ದು, ಸಮಿತಿಯು ‘ಸಹಜ ನ್ಯಾಯ’ದಡಿ ಬಿಡಿಎಗೂ ನೋಟಿಸ್‌ ನೀಡಿತ್ತು. ಆದರೆ, ಇಲ್ಲಿಯ ವರೆಗೂ ಬಿಡಿಎ ನೋಟಿಸ್‌ಗೆ ಉತ್ತರ ನೀಡಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com