ನ್ಯಾ. ಆಡಿಗೆ ಕ್ಲೀನ್ ಚಿಟ್; ರಾಜ್ಯ ಸರ್ಕಾರಕ್ಕೆ ಮುಖಭಂಗ
ಬೆ೦ಗಳೂರು: ಸ್ವಜನ ಪಕ್ಷಪಾತ ನಡೆಸಿದ ಆರೋಪದ ಮೇರೆಗೆ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ. ಅಡಿ ಪದಚ್ಯುತಿ ಪ್ರಕರಣದಲ್ಲಿ ಸಕಾ೯ರ ತೀವ್ರ ಮುಖಭ೦ಗಕ್ಕೀಡಾಗಿದ್ದು, ನ್ಯಾ. ಅಡಿ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎ೦ದು ಹ್ಯೆಕೋಟ್೯ ರಚಿಸಿದ್ದ ನ್ಯಾ.ಆರ್.ಬಿ. ಬೂದಿಹಾಳ್ ನೇತೃತ್ವದ ಸಮಿತಿ ಕ್ಲೀನ್ಚಿಟ್ ನೀಡಿದೆ.
ಅಡಿ ಅವರು ಸ್ವಜನಪಕ್ಷಪಾತ ನಡೆಸಿದ್ದಾರೆ. ಹಾಗಾಗಿ ಅವರನ್ನು ಎರಡನೆಯ ಉಪ ಲೋಕಾಯುಕ್ತ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎಂದು ತನ್ವೀರ್ ಸೇಠ್ ನೇತೃತ್ವದಲ್ಲಿ ಕಾಂಗ್ರೆಸ್ಸಿನ 78 ಶಾಸಕರು ಸ್ಪೀಕರ್ಗೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವದ ಕುರಿತು ರಾಜ್ಯದ ಅಡ್ವಕೇಟ್ ಜನರಲ್, ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಲೋಕಾಯುಕ್ತ ರಿಜಿಸ್ಟ್ರಾರ್ ಜೊತೆ ಚರ್ಚಿಸಿದ ಕಾಗೋಡು ತಿಮ್ಮಪ್ಪ ಅವರು ಆರೋಪಗಳ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಕೆ. ಮುಖರ್ಜಿ ಅವರಿಗೆ ಮನವಿ ಮಾಡಿದ್ದರು. ನ್ಯಾಯಮೂರ್ತಿ ಮುಖರ್ಜಿ ತನಿಖೆ ನಡೆಸಲು ನ್ಯಾಯಮೂರ್ತಿ ಬೂದಿಹಾಳ್ ಸಮಿತಿ ರಚಿಸಿದ್ದರು.
ಅಡಿ ಅವರೂ ಸಮಿತಿಯ ಎದುರು ಪಾಟಿ ಸವಾಲಿಗೆ ಹಾಜರಾಗಿದ್ದರು. ಬೂದಿಹಾಳ್ ಸಮಿತಿ 316 ಪುಟಗಳ ವರದಿಯನ್ನು ಸ್ಪೀಕರ್ ಅವರಿಗೆ ನೀಡಿದೆ.
ವರದಿ ಸಲ್ಲಿಸಿದ ಬೆನ್ನಲ್ಲೇ ಗೊತ್ತುವಳಿ ನಿರ್ಣಯ ಹಿ೦ಪಡೆದ ಸಭಾಧ್ಯಕ್ಷರು
ನ್ಯಾ. ಆರ್.ಬಿ.ಬೂದಿಹಾಳ್ ಸಮಿತಿ ಕ್ಲೀನ್ಚಿಟ್ ನೀಡಿ ವರದಿ ಸಲ್ಲಿಸಿದ ಬೆನ್ನಲ್ಲೇ, ನ್ಯಾ. ಅಡಿ ವಿರುದ್ಧದ ಗೊತ್ತುವಳಿ ನಿಣ೯ಯ ಕೈಬಿಟ್ಟಿರುವುದಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. "ಸಮಿತಿಯ ವರದಿ ಹಾಗೂ ಶೋಧನೆಯನ್ನು ಒಪ್ಪಲಾಗಿದೆ. ನ್ಯಾ. ಅಡಿ ಅವರ ಪದಚ್ಯುತಿ ಸ೦ಬ೦ಧ ಸದನದಲ್ಲಿ ಬಾಕಿ ಉಳಿದಿರುವ ಶಾಸಕ ತನ್ವೀರ್ ಸೇಠ್ ಮತ್ತು ಇತರರು ಮ೦ಡನೆ ಮಾಡಿದ್ದ ಗೊತ್ತುವಳಿಯ ಮು೦ದಿನ ಪ್ರಕ್ರಿಯೆಯನ್ನು ಕೈಬಿಡಲಾಗಿದೆ" ಎ೦ದು ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ