ಮಾಸ್ತಿಗುಡಿ ದುರಂತ: ಮತ್ತೋರ್ವ ನಟ ಅನಿಲ್ ಮೃತ ದೇಹವೂ ಪತ್ತೆ!
ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಡ್ಯಾಂನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ನಟ ಅನಿಲ್ ಮೃತದೇಹ ಪತ್ತೆಯಾಗಿದ್ದು, ಡ್ಯಾಂ ಅವರಣದಲ್ಲಿಯೇ ಅನಿಲ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ತಿಪ್ಪಂಗೊಂಡನಹಳ್ಳಿ ಡ್ಯಾಂ ಬಳಿಯಲ್ಲೇ ಅನಿಲ್ ಅವರ ಮೃತದೇಹ ಕೂಡ ಇಂದು ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್ ಡಿಆರ್ ಎಫ್ ತಂಡದ ಸಿಬ್ಬಂದಿಗಳು ಅನಿಲ್ ಮೃತದೇಹವನ್ನು ಗುರುತಿಸಿ ಶವವನ್ನು ದಡಕ್ಕೆ ಸೇರಿಸಿದ್ದಾರೆ. ಕೂಡಲೇ ಶವವನ್ನು ಇಳಿಸಿಕೊಂಡ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸುವ ಕುರಿತು ಚಿಂತನೆ ನಡೆಸುತ್ತಿದ್ದರಾದರೂ, ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ನಟ ದುನಿಯಾ ವಿಜಯ್ ಅವರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಮನವಿ ಮಾಡಿದರು. ಈಗಾಗಲೇ ದೇಹ ಊದಿಕೊಂಡಿದ್ದು, ದೇಹದಿಂದ ದುರ್ವಾಸನೆ ಬರುತ್ತಿದೆ. ಹೀಗಾಗಿ ಆದಷ್ಟು ಬೇಗ ಮರಣೋತ್ತರ ಪರೀಕ್ಷೆ ನಡೆಸಿ ಅವರ ಕುಟುಂಬಸ್ಥರಿಗೆ ದೇಹ ರವಾನಿಸುವಂತೆ ಸಲಹೆ ನೀಡಿದರು.
ವಿಜಯ್ ಅವರ ಸಲಹೆ ಮೇರೆಗೆ ಸ್ಥಳದಲ್ಲಿ ಹಾಕಲಾಗಿರುವ ಪೆಂಡಾಲ್ ನಲ್ಲೇ ಅನಿಲ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಬಳಿಕ ಅನಿಲ್ ಮೃತ ದೇಹವನ್ನು ಬನಶಂಕರಿ 2ನೇ ಹಂತದಲ್ಲಿರುವ ಅವರ ನಿವಾಸಕ್ಕೆ ರವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ