ಬೆಂಗಳೂರು: ಬೆಂಗಳೂರಿನಲ್ಲಿ ಶಾಲೆಗೆ ಹೋಗುತ್ತಿದ್ದ ಉದ್ಯಮಿಯೊಬ್ಬರ 10 ವರ್ಷದ ಪುತ್ರನನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಶನಿವಾರ ನಡೆದಿದೆ.
ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಅಯ್ಯಪ್ಪ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಮಾಯಾಂಕ್ ಎಂಬ ವಿದ್ಯಾರ್ಥಿಯನ್ನು ಇಂದು ಬೆಳಗ್ಗೆ ಶಾಲೆ ಸಮೀಪವೇ ಅಪಹರಿಸಲಾಗಿದೆ.
ತಾತಾ ಜೊತೆ ಶಾಲೆಗೆ ಬರುತ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಇಯಾನ್ ಕಾರಿನಲ್ಲಿ ಬಂದು ಅಪಹರಿಸಿದ್ದು, ಈ ಸಂಬಂಧ ಬಾಲಕನ ಪೋಷಕರು ಕೆ.ಆರ್.ಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಎಂದಿನಂತೆ ಬಾಲಕ ಶಾಲೆಗೆ ಬಂದಿದ್ದು, ಈ ಮೊದಲೇ ಅಲ್ಲಿ ನಿಂತಿದ್ದ ದುಷ್ಕರ್ಮಿಗಳು, ಕಾರಿನೊಳಗೆ ಬಾಲಕನನ್ನು ಎಳೆದೊಯ್ದು ಅಲ್ಲಿಂದ ಪರಾರಿಯಾಗಿದ್ದಾರೆ.