ಬೆಂಗಳೂರು: ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಭಯೋತ್ಪಾದನೆಯನ್ನು ಮಟ್ಟಹಾಕಲು ಪಾಕಿಸ್ತಾನಕ್ಕೆ ಭಾರತ ಸಹಾಯ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಿನ್ನೆ ರಾಜಕೀಯ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮತನಾಡಿದ ಅವರು, ಭಯೋತ್ಪಾದನೆ ವಿರುದ್ಧವಷ್ಟೇ ನಮ್ಮ ಹೋರಾಟವಾಗಿದ್ದು, ಪಾಕಿಸ್ತಾನ ದೇಶದ ಜನರ ವಿರುದ್ಧವಲ್ಲ. ನೆರೆ ರಾಷ್ಟ್ರದೊಂದಿಗೆ ಸೌಹಾರ್ದದಿಂದ ಬಾಳುವ ಎಲ್ಲಾ ಅವಕಾಶಗಳನ್ನು ಭಾರತ ಮುಕ್ತವಾಗಿರಿಸಿಕೊಂಡಿದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವುದರಿಂದಲೇ ಪಾಕಿಸ್ತಾನ ವಿಶ್ವದಲ್ಲಿ ಏಕಾಂಗಿಯಾಗಿದೆ. ಭಯೋತ್ಪಾದನೆಯನ್ನು ಮಟ್ಟಹಾಕುವ ಸಮಯ ಇದೀಗ ಬಂದಿದೆ. ಉಗ್ರರನ್ನು ಸದೆಬಡಿಯಲು ಪಾಕಿಸ್ತಾನ ಮುಂದಾಗಿದ್ದೇ ಆದರೆ, ಪಾಕಿಸ್ತಾನಕ್ಕೆ ಸಹಾಯ ಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ 18 ಯೋಧರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಪಾಠಿ ಕಲಿಸಲೇಬೇಕಾದ ಒತ್ತಡ ಭಾರತ ಮೇಲೆ ಇತ್ತು. ನಮ್ಮ ವೀರ ಹಾಗೂ ಶೂರ ಯೋಧರು ಸೀಮಿತ ದಾಳಿ ನಡೆಸಿದ್ದನ್ನು ಇಡೀ ವಿಶ್ವವೇ ಗುಣಗಾನ ಮಾಡುತ್ತಿದೆ. ಈ ಹಿಂದೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ಶತ್ರುಗಳು ಬದಲಾಗಬಹುದು. ಆದರೆ, ನೆರೆಹೊರೆಯವರು ಬದಲಾಗುವುದಿಲ್ಲ. ಎಂಬ ಮಾತನ್ನು ಹೇಳಿದ್ದರು.
ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ ಮಾಡುವ ವೇಳೆ ಪಾಕಿಸ್ತಾನ ರಾಷ್ಟ್ರದ ಅಧ್ಯಕ್ಷರನ್ನೂ ಆಹ್ವಾನಿಸಿ, ಸ್ನೇಹದ ಹಸ್ತ ಚಾಚಿದ್ದೆವು. ಇಷ್ಟೆಲ್ಲಾ ಆದರೂ, ಪಾಕಿಸ್ತಾನ ಮಾತ್ರ ಬದಲಾಗಲೇ ಇಲ್ಲ. ಇನ್ನು ಮುಂದಿನ ನಿರ್ಧಾರ ಪಾಕಿಸ್ತಾನಕ್ಕೆ ಬಿಟ್ಟಿದ್ದು, ಭಯೋತ್ಪಾದನೆಯನ್ನು ಪ್ರಚೋದಿಸುವ ತನ್ನ ದುರ್ನಡತೆಯನ್ನು ಮುಂದುವರೆಸಿದ್ದೇ ಆದರೆ, ಪಾಕಿಸ್ತಾನ ಮುಂದೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Advertisement