ಮೈಸೂರು: ಕಾವೇರಿ ಕಿಚ್ಚು ಈಗಲೂ ಮಂಡ್ಯದಲ್ಲಿ ಉರಿಯುತ್ತಲೇ ಇದ್ದು, ಪ್ರತಿಭಟನೆ ವೇಳೆ ಕಾವೇರಿ ಹಿತರಕ್ಷಣಾ ಸಮಿತಿ ಸದಸ್ಯರು ಒತ್ತಾಯಪೂರ್ವಕವಾಗಿ ಮಂಡ್ಯ ಜಿಲ್ಲೆಯ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸಿದ್ದಾರೆಂದು ತಿಳಿದುಬಂದಿದೆ.
ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಮತ್ತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಿನ್ನೆ ಮಂಡ್ಯದಲ್ಲಿ ಜಿಲ್ಲೆಯಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಸಮಿತಿ ಅಧ್ಯಕ್ಷ ಮಾದೇಗೌಡ ಅವರು ಉಪ ಆಯುಕ್ತ, ಸಹಾಯಕ ಆಯುಕ್ತರು, ತಹಸೀಲ್ದಾರ್, ಜಿಲ್ಲಾ ಪಂಚಾಯತ್ ಮತ್ತು ಇನ್ನಿತರೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಕಾವೇರಿ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಕೆಲಸ ಮಾಡುತ್ತಿದ್ದವರನ್ನು ನಿಮಗೆ ನೀರು ಬೇಡವೇ? ಎಂದು ಪ್ರಶ್ನಿಸಿದ್ದರು.
ಇನ್ನು ಕೆಲ ರೈತರು ಕೆಎಸ್ಆರ್ ಟಿಸಿ ಬಸ್ ನಲ್ಲಿ ಟಿಕೆಟ್ ರಹಿತವಾಗಿ ಮಂಡ್ಯಾದಿಂದ ಶ್ರೀರಂಗಪಟ್ಟಣದವರೆಗೂ ಪ್ರಯಾಣ ಮಾಡುತ್ತಿದ್ದ ರೈತರನ್ನು ಹೊಸೂರು ರಸ್ತೆಯಲ್ಲಿ ಕೆಲ ಅಧಿಕಾರಿಗಳು ತಡೆದಿದ್ದರು. ಟಿಕೆಟ್ ಪಡೆದು ಪ್ರಯಾಣ ಮಾಡುವಂತೆ ಸೂಚನೆ ನೀಡಿದ್ದಾರೆ. ಇದನ್ನು ಗಮನಿಸಿದ ಮಾದೇಗೌಡರು ಕೆಎಸ್ಆರ್ ಟಿಸಿ ಅಧಿಕಾರಿಗಳೊಂದಿಗೆ ಫೋನ್ ನಲ್ಲಿ ಮಾತನಾಡಿ ರೈತರ ವಿರುದ್ಧ ಕ್ರಮಗೊಳ್ಳದಂತೆ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿ ಕಾವೇರಿ ಹೋರಾಟ ಮುಂದುವರೆದಿದ್ದು, ಕಾಂಗ್ರೆಸ್ ಸಮಿತಿಯ 100ಕ್ಕೂ ಹೆಚ್ಚು ಸದಸ್ಯರು ಅಶೋಕ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಕಾವೇರಿ ವಿವಾದದಲ್ಲಿ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿದರು.
Advertisement