ಬೇಸಿಗೆ ಮಳೆಯಾಗದಿದ್ದರೆ ನಗರದಲ್ಲಿ ನೀರಿನ ಸಂಕಷ್ಟ ಉಲ್ಪಣ: ಬಿಡಬ್ಲ್ಯೂಎಸ್ಎಸ್'ಬಿ ಅಧ್ಯಕ್ಷ

ರಾಜ್ಯದೆಲ್ಲೆಡೆ ಬರ ಛಾಯೆ ಮೂಡುತ್ತಿದ್ದು, ಈ ಬಾರಿ ಬೇಸಿಗೆ ಮಳೆ ಬಾರದಿದ್ದರೆ, ನಗರದಲ್ಲಿ ನೀರಿನ ಬವಣೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ...
ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್'ಬಿ) ಅಧ್ಯಕ್ಷ ತುಶಾರ್ ಗಿರಿನಾಥ್
ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್'ಬಿ) ಅಧ್ಯಕ್ಷ ತುಶಾರ್ ಗಿರಿನಾಥ್
ಬೆಂಗಳೂರು: ರಾಜ್ಯದೆಲ್ಲೆಡೆ ಬರ ಛಾಯೆ ಮೂಡುತ್ತಿದ್ದು, ಈ ಬಾರಿ ಬೇಸಿಗೆ ಮಳೆ ಬಾರದಿದ್ದರೆ, ನಗರದಲ್ಲಿ ನೀರಿನ ಬವಣೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್'ಬಿ) ಅಧ್ಯಕ್ಷ ತುಶಾರ್ ಗಿರಿನಾಥ್ ಅವರು ಹೇಳಿದ್ದಾರೆ. 
ನಗರದಲ್ಲಿ ಉಂಟಾಗಿರುವ ನೀರಿನ ಅಭಾವ ಕುರಿತಂತೆಮಾತನಾಡಿರುವ ಅವರು, ಪ್ರಸ್ತುತ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಆದರೂ, ನೀರು ಸರಬರಾಜಿನಲ್ಲಿ ನಾವು ಯಾವುದೇ ಕಡಿತವನ್ನು ಮಾಡಿಲ್ಲ. ಪ್ರತೀನಿತ್ಯ ನಗರ ವಾಸಿಗಳಿಗೆ 1,350 ಮಿಲಿಯನ್ ಲೀಟರ್ ನಷ್ಟು ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 
ಮೇ.31ರವರೆಗೂ ನಾವು ನೀರನ್ನು ಸರಬರಾಜು ಮಾಡಬಹುದು. 60 ಖಾಸಗಿ ನಿರ್ವಾಹಕರು ಸೇರಿದಂತೆ ಒಟ್ಟು  90 ನೀರಿನ ಟ್ಯಾಂಕರ್ ನಿರ್ವಾಹಕರಿದ್ದಾರೆ. ಇದರಲ್ಲಿ ಸಾಕಷ್ಟು ಮಂದಿ ನಗರದ ಹೊರವಲಯದಲ್ಲೇ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟ್ಯಾಂಕರ್ ಗಳ ಮುಖಾಂತರ ನೀರನ್ನು ಪೂರೈಸುತ್ತಿದ್ದಾರೆ. 
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬೇಸಿಗೆ ಮಳೆಯಾಗುವ ವಿಶ್ವಾಸವಿದ್ದು, ಒಂದು ವೇಳೆ ಬೇಸಿಗೆ ಮಳೆ ಬಂದಿದ್ದೇ ಆದರೆ, ಮಾನ್ಸೂನ್ ಬರುವವರೆಗೂ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಬೇಸಿಗೆ ಮಳೆಯಿಂದಲೂ ನಮಗೆ ಅಗತ್ಯವಿದ್ದಷ್ಟು ನೀರು ಒದಗುವ ನಂಬಿಕೆಗಳಿಲ್ಲ. ಪ್ರಸ್ತುತ ಎರಡು ದಿನಕ್ಕೊಮ್ಮೆ ನೀರನ್ನು ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೂರು ದಿನಗಳಿಗೊಮ್ಮೆ ನೀರನ್ನು ಬಿಡಬೇಕಾದ ಪರಿಸ್ಥಿತಿ ಎದುರಾಗಬಹುದು. ಇದರಿಂದ ನಾವು ಜೂನ್.10 ವರೆಗೂ ನೀರು ಪೂರೈಸಲು ಸಾಧ್ಯವಾಗುತ್ತದೆ. 
ಜನರು ಎಚ್ಚೆತ್ತುಕೊಂಡು ನೀರನ್ನು ಮಿತವಾಗಿ ಬಳಸುವುದನ್ನು ಆರಂಭವಿಸಬೇಕು. ಒಬ್ಬ ವ್ಯಕ್ತಿ ನೀರನ್ನು ವ್ಯರ್ಥಮಾಡಿದರೆ, ಮತ್ತೊಬ್ಬ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಜನರು ಸಾಧ್ಯವಾದಷ್ಟು ಮಳೆನೀರು ಕೊಯ್ಲುವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com