ಬೆಂಗಳೂರು: ವಿಮಾ ಕಂಪನಿಗಳು ಲಾರಿ ಮಾಲೀಕರ ಒಕ್ಕೂಟ ಬೇಡಿಕೆ ಈಡೇರಿಸಲು ತಿರಸ್ಕರಿಸಿರುವ ಹಿನ್ನಲೆಯಲ್ಲಿ ಮಂಗಳವಾರದಿಂದ ಮುಷ್ಕರವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ಇಂದಿನಿಂದ ರಾಜ್ಯಕ್ಕೆ ಪೆಟ್ರೋಲ್ ಡೀಸಲ್ ಪೂರೈಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ವಾಹನಗಳ ವಿಮೆ ಕಂತಿನ ದರ ಏರಿಕೆ ಕೈಬಿಡುವಂತೆ ಎಲ್ಲ ವಾಹನಗಳ ಮಾಲೀಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ದೇಶವ್ಯಾಪಿ ಮುಷ್ಕರಕ್ಕೆ ‘ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಕರೆ ನೀಡಿದೆ. ಆದರೆ ನಿನ್ನೆ ನಡೆದ ಸಂಧಾನ ಮಾತುಕತೆ ವಿಫಲವಾಗಿದ್ದು, ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಅದರರಂತೆ ಇಂದಿನಿಂದ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತವಾಗಲಿದ್ದು, ಪ್ರಮುಖವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಸೇವೆ ಸ್ಥಗಿತವಾಗಲಿದೆ.
ಇಷ್ಟು ಮಾತ್ರವಲ್ಲದೇ ರಾಜ್ಯ ಖಾಸಗಿ ಬಸ್ಗಳ ಮಾಲೀಕರ ಸಂಘ, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ, ಸರಕು ಸಾಗಣೆದಾರರ ಸಂಘವು ಮುಷ್ಕರಕ್ಕೆ ಬೆಂಬಲ ನೀಡಿವೆ. ಹೀಗಾಗಿ ಅಂಥ ವಾಹನಗಳು ಸಹ ಮಂಗಳವಾರದಿಂದ ರಸ್ತೆಗೆ ಇಳಿಯುವುದಿಲ್ಲ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪುದುಚೇರಿ ಹಾಗೂ ತೆಲಂಗಾಣದಲ್ಲಿ ಮಾತ್ರ ಮುಷ್ಕರ ಆರಂಭಗೊಂಡಿದ್ದು, ಏಪ್ರಿಲ್ 8ರಿಂದ ದೇಶವ್ಯಾಪಿ ಮುಷ್ಕರ ಶುರುವಾಗಲಿದೆ. ಪರಿಣಾಮ ಹಾಲು, ಹಣ್ಣು–ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆ ಕೂಡ ಸ್ಥಗಿತವಾಗಿದ್ದು, ಈಗಾಗಲೇ ಬೇಳೆ, ಅಕ್ಕಿ, ಮೊಟ್ಟೆ ಸೇರಿ ಹಲವು ವಸ್ತುಗಳ ಸಾಗಣೆ ಬಂದ್ ಆಗಿದೆ. ಈಗ ಅಗತ್ಯ ವಸ್ತುಗಳ ಸಾಗಣೆಯೂ ಸ್ಥಗಿತವಾಗುವುದರಿಂದ ಮಾರುಕಟ್ಟೆಯಲ್ಲಿ ಅವುಗಳ ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ದೇಶದ ಆರ್ಥಿಕತೆ ಹಾಗೂ ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಇಂದು ತೈಲ ಟ್ಯಾಂಕರ್ ಮಾಲೀಕರ ಸಭೆ
ವಿಮಾನ ಕಂಪನಿಗಳ ಜೊತೆಗಿನ ಸಂಧಾನ ವಿಫಲವಾಗಿದ್ದರಿಂದ ತೈಲ ಸಾಗಣೆ ಟ್ಯಾಂಕರ್ ಮಾಲೀಕರು ಹಾಗೂ ಚಾಲಕರು ಮಂಗಳವಾರ ಸಭೆ ನಡೆಸಲು ನಿರ್ಧರಿಸಿದ್ದಾರೆ. ‘ಐಆರ್ಡಿಎ ವರ್ತನೆ ಬೇಸರ ತರಿಸಿದೆ. ತೈಲ ಸಾಗಣೆ ಸ್ಥಗಿತಗೊಳಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಬಂಕ್ ಮಾಲೀಕರು ಸಹ ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ತಿಳಿಸಲಿದ್ದಾರೆ’ ಎಂದು ತೈಲ ಸಾಗಣೆ ಟ್ಯಾಂಕರ್ ಚಾಲಕರ ಸಂಘದ ಶ್ರೀರಾಮ್ ಹೇಳಿದರು.
Advertisement