ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಮಳೆರಾಯನ ಅಡ್ಡಿ!

ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಮಂಗಳವಾರ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕೊಂಚ ಅಡ್ಡಿಯಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಮಂಗಳವಾರ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕೊಂಚ ಅಡ್ಡಿಯಾಯಿತು.

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆರಂಭಕ್ಕೂ ಮೊದಲೇ ಮಳೆ ನಿಂತಿತ್ತಾದರೂ, ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಪರೇಡ್ ಮೈದಾನ ಸಂಪೂರ್ಣ ಕೆಸರು  ಗುಂಡಿಯಾಗಿತ್ತು, ಹೀಗಾಗಿ ಮೈದಾನದಲ್ಲಿ ನಡೆಯಬೇಕಿದ್ದ ಹಲವು ಕಾರ್ಯಕ್ರಮಗಳು ಸ್ಥಗಿತವಾಯಿತು. ರಾಜ್ಯದ ವಿವಿಧ ಪೊಲೀಸ್ ಪಡೆಗಳ ಮಾರ್ಚ್ ಫಾಸ್ಟ್, ಸಾಂಸ್ಕೃತಿಕ ಕಾರ್ಯಕ್ರಮಗಳು ಮಳೆಯಿಂದಾಗಿ ರದ್ದಾಯಿತು.

ತಡರಾತ್ರಿ ಶರುವಾದ ಮಳೆ ಬೆಳಗಿನಜಾವದವರೆಗೂ ಆರ್ಭಟಿಸಿದ್ದರಿಂದ ಬೆಂಗಳೂರಿನ ಜನತೆಯ ಸ್ವಾತಂತ್ರ್ಯೋತ್ಸದ ಸಂಭ್ರಮಕ್ಕೆ ಅಕ್ಷರಶಃ ತಣ್ಣೀರೆರಚಿದಂತಾಯಿತು. ಮಳೆಯಿಂದಾಗಿ ಮಾಣಿಕ್ ಷಾ ಮೈದಾನ​ ಕೆಸರಿನಂತಾಗಿ  ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮಕ್ಕೆ ಬಂದ ಅಥಿತಿಗಳಿಗೆ ಕಿರಿಕಿರಿ ಉಂಟಾಯಿತು. ಮಳೆಯಿಂದಾಗಿ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಜನರ ಆಗಮನ ಸಂಖ್ಯೆಯಲ್ಲಿ ಕೂಡ ಇಳಿಮುಖವಾಗಿತ್ತು.

ನಗರಾದ್ಯಂತ ರಾತ್ರಿ ಇಡೀ ಸುರಿದ "ಮಹಾ ಮಳೆ"
ಇನ್ನು ನಿನ್ನೆ ತಡರಾತ್ರಿ ಆರಂಭವಾಗಿದ್ದ ಮಳೆ ಬೆಳಗಿನ ಜಾವದವರೆಗೂ ಎಡೆಬಿಡದೆ ಸುರಿಯಿತು. ಪರಿಣಾಮ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ರಾತ್ರಿ ಇಡೀ ಪರದಾಡುವಂತಾಯಿತು. ನಾಯಂಡ ಹಳ್ಳಿ, ದೀಪಾಂಜಲಿ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಡೈರಿಸರ್ಕಲ್, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಸೂರುರಸ್ತೆ, ಬೊಮ್ಮನಹಳ್ಳಿ, ಸಿಲ್ಕ್ ಬೋರ್ಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com