ಇಂದಿರಾ ಕ್ಯಾಂಟೀನ್ ಗೆ ಹರಿದು ಬಂದ ಜನಸಾಗರ: 2ನೇ ದಿನಕ್ಕೆ ದೂರುಗಳ ಸರಮಾಲೆ

ಕ್ಯಾಂಟೀನ್ ತೆರೆದ 1 ಗಂಟೆಯಲ್ಲಿಯೇ ತಯಾರಿಸಿದ್ದ ಆಹಾರವೆಲ್ಲಾ ಖಾಲಿಯಾಗಿತ್ತು. ಹಲವರಿಗೆ ತಿಂಡಿ ಸಿಗದೇ ವಾಪಸ್ ಆದ ಘಟನೆಗಳು ...
ವಯಸ್ಕರೊಬ್ಬರು ತಮ್ಮ ಮೊಮ್ಮಗಳ ಜೊತೆ ಬೆಳಗಿನ ಉಪಹಾರ ಸೇವಿಸುತ್ತಿರುವುದು
ವಯಸ್ಕರೊಬ್ಬರು ತಮ್ಮ ಮೊಮ್ಮಗಳ ಜೊತೆ ಬೆಳಗಿನ ಉಪಹಾರ ಸೇವಿಸುತ್ತಿರುವುದು
ಬೆಂಗಳೂರು: ಉದ್ಘಾಟನೆ ನಂತರ ಬಹಳ ಪ್ರಚಾರ ಗಳಿಸಿಕೊಂಡಿರುವ ಇಂದಿರಾ ಕ್ಯಾಂಟೀನ್ ಗೆ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. 
ಕ್ಯಾಂಟೀನ್ ತೆರೆದ 1 ಗಂಟೆಯಲ್ಲಿಯೇ  ತಯಾರಿಸಿದ್ದ ಆಹಾರವೆಲ್ಲಾ ಖಾಲಿಯಾಗಿತ್ತು. ಹಲವರಿಗೆ ತಿಂಡಿ ಸಿಗದೇ ವಾಪಸ್ ಆದ ಘಟನೆಗಳು ನಡೆದಿವೆ.
ಈಜೀಪುರದ ಗರುಡಾ ಮಾಲ್ ಮತ್ತು ಲಾಂಗ್ ಪೋರ್ಡ್ ರಸ್ತೆ ಸೇರಿದಂತೆ ಇತರೆ  ಪ್ರದೇಶಗಳಲ್ಲಿರುವ ಕ್ಯಾಂಟೀನ್ ಗಳಲ್ಲಿ ಬೆಳಗ್ಗೆ 8.30ಕ್ಕೆ ತಿಂಡಿ ಖಾಲಿಯಾಗಿ ಬಂದವರೆಲ್ಲಾ ಖಾಲಿ ಕೈಯ್ಯಲ್ಲಿ ವಾಪಾಸಾದರು. ಜೊತೆಗೆ ಕುಡಿಯಲು ಸರಿಯಾದ ನೀರು ಇಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಆದರೆ ಊಟದ ಸಮಯಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಪ್ರತಿ ಕ್ಯಾಂಟೀನ್ ನಲ್ಲೂ ಉದ್ದದ ಕ್ಯೂ ಕಂಡು ಬಂದಿತ್ತು, ಕೆಲವು ಪ್ರದೇಶಗಳ ಕ್ಯಾಂಟೀನ್ ನ ಸಾಲಿನಲ್ಲಿ ವಿದ್ಯಾರ್ಥಿಗಳು ಕ್ಯೂ ನಿಂತಿದ್ದು ಕಂಡು ಬಂದಿತ್ತು.
ಹೆಚ್ಚಿನ ಜನ ಇಂದಿರಾ ಕ್ಯಾಂಟೀನ್ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮತ್ತೆ ಕೆಲವರು ಆಹಾರದ ಪ್ರಮಾಣದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಬೆಳಗ್ಗೆ 5 ರು. ಕೊಟ್ಟು ರವಾ ಕಿಚಡಿ ಪಡೆದೆ. ಒಂದು ಸಣ್ಣ ಕಪ್ ನಲ್ಲಿ ಕೊಟ್ಟರು. ವಯಸ್ಕರಿಗೆ ಅವರು ಕೊಡುವ ಆಹಾರ ಸಾಕಾಗುವುದಿಲ್ಲ, ಹೀಗಾಗಿ ನಾನು ಮತ್ತೆ ಏರಡನೇ ಟೋಕನ್ ಪಡೆಯಲು ಹೋದಾಗ ಒಬ್ಬ ವ್ಯಕ್ತಿಗೆ ಒಂದೇ ಕೂಪನ್ ಎರಡು ಕೊಡುವುದು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದರು ಎಂದು ಹನುಮಂತನಗರದ ನಾಗಾರಾಜ್ ಎಂಬುವರು ಹೇಳಿದ್ದಾರೆ.
ಬೆಳಗ್ಗೆ 8.20ರ ವೇಳೆಗೆ ನಾನು ತೆರಳಿದ್ದೆ, ಆದರೆ ಅಷ್ಟರಲ್ಲಿ ಬೆಳಗ್ಗಿನ ಉಪಹಾರ ಖಾಲಿಯಾಗಿತ್ತು, ಆದರೆ ಮತ್ತೆ ಮಧ್ಯಾಹ್ನ ಊಟಕ್ಕೆ 10 ರು. ನೀಡಿ ಬಿಸಿ ಬೇಳೆ ಬಾತ್ ಮತ್ತು ಮೊಸರನ್ನ ಖರೀದಿಸಿದೆ ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀನಿವಾಸ್ ತಿಳಿಸಿದ್ದಾರೆ.
ಶಾಂತಲಾ ನಗರ ಮತ್ತು ಗರುಡಾ ಮಾಲ್  ಬಳಿಯಿರುವ  ಕ್ಯಾಂಟೀನ್ ಗೆ ಮಧ್ಯಾಹ್ನ 12.30ರ ವೇಳೆಗೆ ತೆರಳಿದ್ದೆ,  ಆದರೆ ಅಲ್ಲಿಗೆ ಇನ್ನೂ ಊಟ ಬಂದಿರಿಲಿಲ್ಲ, ಹಲವು ಮಂದಿ ಕಾಯುತ್ತಿದ್ದರು. ಆದರೆ ಊಟ ಬಂದಿದ್ದು 2.30ರ ವೇಳೆಗೆ, ಅಷ್ಟರಲ್ಲಾಗಲೇ ಹಲವು ಮಂದಿ ಅಲ್ಲಿಂದ ತೆರಳಿದ್ದರು ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಗೆ ಆಗಾಧವಾದ ಪ್ರಮಾಣದ ಜನ ಆಗಮಿಸುತ್ತಿದ್ದಾರೆ. ಪ್ರತಿ ಕ್ಯಾಂಟೀನ್ ನಲ್ಲಿ 500 ಮಂದಿ ಬರಬಹುದೆಂದು ನಾವು ನಿರೀಕ್ಷಿಸಿದ್ದೆವು. ಆದರೆ ನಿರೀಕ್ಷೆಗಿಂತ ಡಬಲ್ ಪ್ರಮಾಣದಲ್ಲಿ ಜನ ಆಗಮಿಸಿದ್ದಾರೆ. ಕೆಲ ಕ್ಯಾಂಟೀನ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೊಂದರೆ ಉಂಟಾಗಿದೆ, ಊಟ ಖಾಲಿಯಾದ ಹಿನ್ನೆಲೆಯಲ್ಲಿ ಹಲವು ಮಂದಿ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದರು ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ವಿವರಿಸಿದ್ದಾರೆ.
ಎಲ್ಲಾ ಕ್ಯಾಂಟೀನ್ ಗಳಲ್ಲಿ ವ್ಯವಸ್ಥಿತವಾಗಿ ಊಟ ನೀಡಲು ಕೆಲ ಸಮಯ ಬೇಕಾಗುತ್ತದೆ, ಹೆಚ್ಚಿನ ಪ್ರಮಾಣದಲ್ಲಿ ಆಹಾರ ತಯಾರಿಸಲಾಗುತ್ತದೆ. 27 ಕ್ಯಾಂಟೀನ್ ಗಳು ಇನ್ನೂ ಸಿದ್ದವಾಗಿಲ್ಲ, ಮಾರಾಟ ಎಜೆನ್ಸಿಗಳು ಆಹಾರ ತಯಾರಿಸಿ ಅದನ್ನು ಕ್ಯಾಂಟೀನ್ ಗಳಿಗೆ ಪೂರೈಸುತ್ತಿದ್ದಾರೆ. 9 ಅಡುಗೆ ಮನೆಗಳು ಸಿದ್ಧವಾಗಿದ್ದು. 18 ಕಿಚನ್ ಗಳು ನಿರ್ಮಾಣ ಹಂತದಲ್ಲಿವೆ. ಈ ಎಲ್ಲಾ ಅಡುಗೆ ಮನೆಗಳಲ್ಲಿ ಶೀಘ್ರವೇ ಅಡುಗೆ ಸಾಧನಗಳನ್ನು ಅಳವಡಿಸಲಾಗುವುದು, ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಕೆಲಸಗಳು ಪೂರ್ಣ ವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿದಿನ ಊಟ ಪಡೆಯಲು ಕ್ಯಾಂಟೀನ್ ಮುಂದೆ ಸಾಲು ನಿಲ್ಲುವುದರಿಂದ ಸಮಯ ವ್ಯರ್ಥ. ಅದರಲ್ಲೂ ಕೆಲಸದ ಸಮಯದಲ್ಲಿ ಕ್ಯೂ ನಿಲ್ಲಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಿಂಗಳಿನ ಕೂಪನ್ ವ್ಯವಸ್ಥೆ ಮಾಡಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ. ಕೆಲವರು ಮೆನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ, ಆದರೆ ಈಗ ಅದು ಸಾದ್ಯವಾಗದ ಕೆಲಸ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com