ರಾಜ್ಯ
ಬೆಂಗಳೂರು ನಿವಾಸಿಗಳಿಗೆ ಕಡಿಮೆ ದರದ 1 ಲಕ್ಷ ಮನೆಗೆ ಆನ್ ಲೈನ್ ಅರ್ಜಿ ಆಹ್ವಾನ
ಆರ್ಥಿಕವಾಗಿ ಮತ್ತು ಸಾಮಾಜಿಕ ಹಿಂದುಳಿದ ಬೆಂಗಳೂರಿನ ಬಡ ಕುಟುಂಬಗಳಿಗೆ ಸೂರು ಒದಗಿಸುವ ರಾಜ್ಯ ಸರ್ಕಾರದ...
ಬೆಂಗಳೂರು: ಆರ್ಥಿಕವಾಗಿ ಮತ್ತು ಸಾಮಾಜಿಕ ಹಿಂದುಳಿದ ಬೆಂಗಳೂರಿನ ಬಡ ಕುಟುಂಬಗಳಿಗೆ ಸೂರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಿನ್ನೆ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಈ ವಸತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಒತ್ತುವರಿಯಾಗಿದ್ದ 1,200 ಎಕರೆ ಸರ್ಕಾರಿ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಈ ಸ್ಥಳದಲ್ಲಿ 1 ಲಕ್ಷ ಮನೆ ನಿರ್ಮಿಸಲಾಗುವುದು ಎಂದರು.
ಒಂದು ಲಕ್ಷ ಮನೆಯಲ್ಲಿ ಶೇ.10ರಷ್ಟು ಎಸ್ಸಿ ಹಾಗೂ ಶೇ.10 ಎಸ್ಟಿ, ಶೇ.10 ರಷ್ಟು ಅಲ್ಪ ಸಂಖ್ಯಾತರಿಗೆ ಹಾಗೂ ಶೇ.50ರಷ್ಟು ಸಾಮಾನ್ಯರಿಗೆ ಮೀಸಲಿಡಲಾಗುವುದು. ಈ ಯೋಜನೆಯಡಿ ಪರಿಶಿಷ್ಟ -ಜಾತಿ ವರ್ಗದವರಿಗೆ 3.5 ಲಕ್ಷ ಹಾಗೂ ಸಾಮಾನ್ಯ ವರ್ಗದವರಿಗೆ 2.75 ಲಕ್ಷ ರೂ. ಸಬ್ಸಿಡಿ ನೀಡುವುದಾಗಿ ಸಿಎಂ ತಿಳಿಸಿದರು.
ಪ್ರತಿವರ್ಷ ಒಂದು ಲಕ್ಷ ಮನೆಗಳನ್ನು ನಿರ್ಮಿಸುವ ಉದ್ದೇಶವಿದ್ದು, ಪ್ರತಿ ಮನೆ 30 ಚದುರ ಮೀಟರ್ ವಿಸ್ತೀರ್ಣದ್ದಾಗಿದೆ. ಒಂದು ಕೊಠಡಿ, ಹಾಲ್, ಅಡುಗೆ ಕೋಣೆ, ಶೌಚಾಲಾಯ ಹಾಗೂ ಸ್ನಾನದ ಮನೆ ಒಳಗೊಂಡಿರುತ್ತದೆ. ನೆಲಹಂತಸ್ತು ಮತ್ತು ಅದರ ಮೇಲೆ ಮೂರು ವಸತಿ ಮನೆಗಳನ್ನು ನಿರ್ಮಿಸಲಾಗುವುದು. ಒಂದು ಮನೆ ನಿರ್ಮಾಣಕ್ಕೆ 5 ರಿಂದ 6 ಲಕ್ಷ ರು. ಖರ್ಚಾಗುತ್ತದೆ.
ಕುಟುಂಬದ ವಾರ್ಷಿಕ ಆದಾಯ 87,600 ರೂ.ಗಳ ಮಿತಿಯಲ್ಲಿರುವವರು ಈ ಯೋಜನೆಯಡಿ ಮನೆ ಪಡೆಯಲು ಅರ್ಹರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಡವರಿಗೆ ಸೂರು ಒದಗಿಸುವ ಒಂದು ಮಹತ್ವದ ಕಾರ್ಯಕ್ರಮ ಇದಾಗಿದೆ. ಆನ್ಲೈನ್ ಮೂಲಕವೇ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಇಂದಿನಿಂದ ಜನವರಿ 5 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ ಲಾಟರಿ ಮೂಲಕ 75 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಉಳಿದ 25 ಸಾವಿರ ಮನೆಗಳನ್ನು ನಿಜವಾಗಿಯೂ ಅಗತ್ಯವಿರುವ ಹಾಗೂ ಅರ್ಹ ಬಡವರಿಗೆ ಹಂಚಿಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು-1 ಸೇರಿದಂತೆ ಎಲ್ಲೆಡೆ ಈ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.ashraya.kar.nic.in ನ್ನು ಅಥವಾ ದೂ:080-2311888 ಸಂಪರ್ಕಿಸಬಹುದು.