ಮಂಗಳೂರು: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪರೀಕ್ಷೆ ನೀಡುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುವಂತೆ ಸಿಖ್ ವ್ಯಕ್ತಿಗೆ ಅವಮಾನಿಸಿದ ಅಧಿಕಾರಿಯೊಬ್ಬರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಗಳೂರಿನ ಬಳ್ಳಾಲ್ ಬಾಗ್ ನಿವಾಸಿಯಾಗಿರುವ ಕರ್ಮೇಂದರ್ ಸಿಂಗ್ ರಾಥೋಡ್ ಎಂಬುವವರು ಮಂಗಳೂರು ಹೊರವಲಯದ ಮೂಡುಶೆಟ್ಟೆಯಲ್ಲಿರುವ ಡ್ರೈವಿಂಗ್ ಟೆಸ್ಟ್ ಕೇಂದ್ರಕ್ಕೆ ಟೆಸ್ಟ್ ನೀಡಲೆಂದು ತೆರಳಿದ್ದರು. ಈ ವೇಳೆ ತಲೆಗೆ ಹೆಲ್ಮೆಟ್ ಧರಿಸುವಂತೆ ಅಲ್ಲಿದ್ದ ಅಧಿಕಾರಿಗಳು ಸೂಚಿಸಿದ್ದಾರೆ. ಈ ವೇಳೆ ತಮಗೆ ಹೆಲ್ಮೆಟ್ ಧಾರಣೆಯಿಂದ ವಿನಾಯಿತಿ ಇರುವ ಪತ್ರವನ್ನು ಕರ್ಮೇಂದರ್ ಸಿಂಗ್ ಅವರು ಅಧಿಕಾರಿಗೆ ತೋರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಆರ್'ಟಿಒ ನಿರೀಕ್ಷಕ ನಾಗರಾಜ್ ಭಟ್ ಎಂಬುವವರಿ ನಿಮ್ಮ ಬಳಿ ತಲೆ ಇದ್ದರೆ, ಹೆಲ್ಮೆಟ್ ಧರಿಸಲೇಬೇಕು ಎಂದು ನಿಂದಿಸಿದ್ದಾರೆ.
ಇದರಿಂದ ತಮಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ ಎಂದು ಕರ್ಮೇಂದರ್ ಸಿಂಗ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಧಿಲ್ ಅವರು, ಪ್ರಕರಣ ಸಂಬಂಧ ಕರ್ಮೇಂದರ್ ಸಿಂಗ್ ಎಂಬುವವರು ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಆರ್'ಟಿಒ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ಹೇಳಿದ್ದಾರೆ.