ಬಂಧಿತ ಆರೋಪಿ, ಮಧುಕರ್ ರೆಡ್ಡಿಯಾಗಿದ್ದು, ಆತ ತಲೆ ಬೋಳಿಸಿಕೊಂಡು ಯಾರಿಗೂ ಗುರುತು ಸಿಗದಂತೆ ಕೇರಳದ ಎರ್ನಾಕುಲಂನಲ್ಲಿದ್ದ ಎಂದು ಚಿತ್ತೂರು ಎಸ್ ಪಿ ಶ್ರೀನಿವಾಸ್ ಘಟ್ಟಿಮನೇನಿ ತಿಳಿಸಿದ್ದಾರೆ.
ಮಧುಕರ್ ರೆಡ್ಡಿ ಬಂಧನದ ನಂತರ ಚಿತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ವಿವರ ನೀಡಿದ ಅವರು, ಮಧುಕರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 2013ರಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ಮಾಡಿದ್ದು ನಾನೇ, ಖರ್ಚಿಗೆ ದುಡ್ಡಿಲ್ಲದೆ ಎಟಿಎಂಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಿದರು.
ಜ್ಯೋತಿಯವರ ಮೇಲೆ ಹಲ್ಲೆ ಮಾಡುವ ಮುನ್ನಾದಿನ ಕಬ್ಬನ್ ಪಾರ್ಕ್ ನಲ್ಲಿ ಇಡೀ ದಿನ ಊಟ ತಿಂಡಿಯಿಲ್ಲದೆ ಅಲೆದಾಡುತ್ತಿದ್ದ. 2005ರಿಂದ ಅನೇಕ ಕುಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
2013, ನವೆಂಬರ್ ನಲ್ಲಿ ಬೆಂಗಳೂರಿಗೆ ಬರುವ ಮುನ್ನ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಧರ್ಮಾವರಂನಲ್ಲಿ ವೃದ್ಧೆಯೊಬ್ಬರನ್ನು ಕೊಂದು ಬಂದಿದ್ದ.ನಂತರ ಕದಿರಿಗೆ ಪ್ರಯಾಣ ಬೆಳೆಸಿ ಕಳ್ಳತನ ಮಾಡಿ ಅಲ್ಲಿಂದ ಬೆಂಗಳೂರಿಗೆ ಬಂದಿದ್ದ ಎಂದು ಮಧುಕರ ರೆಡ್ಡಿಯ ವೃತ್ತಾಂತ ಹೇಳುತ್ತಾರೆ ಪೊಲೀಸರು.