
ಬೆಂಗಳೂರು: ಇಡೀ ನಗರವನ್ನು ಬೆಚ್ಚಿ ಬೀಳಿಸಿದ್ದ ಕೋಗಿಲು ಕ್ರಾಸ್ ಬಳಿಯ ಶೂಟೌಟ್ ಪ್ರಕರಣ ಸಂಬಂಧ ದಾಸನಪುರ ಎಪಿಎಂಸಿ ಯಾರ್ಡ್ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಹೇಳಿಕೆ ನೀಡಿದ್ದು, ತಮ್ಮ ಮೇಲಿನ ಶೂಟೌಟ್ ಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರೇ ಕಾರಣ ಎಂದು ಹೇಳಿದ್ದಾರೆ.
ಶೂಟೌಟ್ ನಡೆದ ಸುಮಾರು 2 ವಾರಗಳ ಬಳಿಕ ಆಸ್ಪತ್ರೆಯಿಂದಲೇ ವಿಡಿಯೋದಲ್ಲಿ ಮಾತನಾಡಿರುವ ಶ್ರೀನಿವಾಸ್ ತಮ್ಮ ಮೇಲಿನ ಶೂಟೌಟ್ ಗೆ ಶಾಸಕ ಎಸ್ ಎರ್ ವಿಶ್ವನಾಥ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಶ್ರೀನಿವಾಸ್ ಅವರ ನಿರ್ದೇಶನದ ಮೇರೆಗೆ ರೌಡಿ ಶೀಟರ್ ಗಳಾದ ಬೂನ್ ಬಾಬು, ನಾಗಶೆಟ್ಟಿ ಹಳ್ಳಿ ಸತೀಶ್ ದಾಳಿ ಮಾಡಿದ್ದರು ಎಂದು ಆರೋಪಿಸಿದ್ದಾರೆ. ನಗರದ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀನಿವಾಸ್ ಚಿಕಿತ್ಸಾ ಕೊಠಡಿಯಿಂದಲೇ ವಿಡಿಯೋದಲ್ಲಿ ಮಾತನಾಡಿದ್ದು, ಫೆ.3ರಂದು ರೈತ ಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮನೆಗೆ ವಾಪಸ್ಸು ಆಗುತ್ತಿದ್ದ ವೇಳೆ ನಗರದ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ಬೈಕ್ನಲ್ಲಿ ಬಂದ ಇಬ್ಬರು ನನ್ನ ಮೇಲೆ ಬಂದೂಕಿನಿಂದ ಮೂರು ಗುಂಡುಗಳನ್ನು ಹಾರಿಸಿ ಪರಾರಿಯಾದರು. ಅಲ್ಲದೆ, ಈ ಶೂಟೌಟ್ ಕೃತ್ಯದ ಹಿಂದೆ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿ ಮೂವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಶೂಟೌಟ್ ಕೃತ್ಯದಲ್ಲಿ ಶಾಸಕ ವಿಶ್ವನಾಥ್, ಅವರ ಆಪ್ತ ಡಾನ್ ಸತೀಶ್ ಅಲಿಯಾಸ್ ನಾಗಶೆಟ್ಟಿಹಳ್ಳಿ ಸತೀಶ್ ಹಾಗೂ ಬೂನ್ಬಾಬು ಅಲಿಯಾಸ್ ರಾಜೇಂದ್ರ ಪ್ರಸಾದ್ ಭಾಗಿಯಾಗಿರುವ ಬಗ್ಗೆ ನನಗೆ ಶಂಕೆ ಇದೆ. ಅಲ್ಲದೆ, ನನಗೆ ಗೊತ್ತಿಲ್ಲದಿದ್ದಂತೆ ಗುಂಡಿನ ದಾಳಿ ನಡೆಸಿದರು. ಈ ಸಂಬಂಧ ಒಟ್ಟು ಐದು ಜನರ ವಿರುದ್ಧ ವಕೀಲರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಕಡಬಗೆರೆ ಶ್ರೀನಿವಾಸ್ ತಿಳಿಸಿದ್ದಾರೆ. "ಈ ಶೂಟೌಟ್ ಕೃತ್ಯದಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕೈವಾಡವಿದೆ. ಈ ಸಂಬಂಧ ಎಲ್ಲಿ ಬೇಕಾದರೂ ಬಂದು ನಾನು ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
Advertisement