ಬೆಂಗಳೂರು: ಓಲಾ ಕಂಪನಿಯೆದುರು ಇಬ್ಬರು ಚಾಲಕರಿಂದ ಆತ್ಮಹತ್ಯೆ ಯತ್ನ

ಮುರುಗೇಶ್ ಪಾಳ್ಯದಲ್ಲಿರುವ ಓಲಾ ಕಂಪೆನಿಯ ಮುಖ್ಯ ಕಚೇರಿ ಎದುರು ಇಬ್ಬರು ಟ್ಯಾಕ್ಸಿ ಚಾಲಕರು ಆತ್ಮಹತ್ಯೆಗೆ ಯತ್ನಿಸಿದ ಘಟನೆ...
ಓಲಾ
ಓಲಾ

ಬೆಂಗಳೂರು: ಮುರುಗೇಶ್ ಪಾಳ್ಯದಲ್ಲಿರುವ ಓಲಾ ಕಂಪೆನಿಯ ಮುಖ್ಯ ಕಚೇರಿ ಎದುರು ಇಬ್ಬರು ಟ್ಯಾಕ್ಸಿ ಚಾಲಕರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಸುಮಾರು ಮಧ್ಯಾಹ್ನ 2.30 ರವೇಳೆಗೆ ಮುರುಗೇಶ್‌ ಪಾಳ್ಯದಲ್ಲಿರುವ ಓಲಾ ಕಂಪೆನಿಯ ಮುಖ್ಯ ಕಚೇರಿ ಎದುರು ಸೇರಿದ್ದ ಪ್ರತಿಭಟನಾಕಾರರು, ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಚಾಲಕ ಮೋಹನ್‌ ಬಾಬು ಎಂಬುವರು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಅಸ್ವಸ್ಥ ಗೊಂಡಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಮೋಹನ್ ಕ್ಯಾಬ್ ಖರೀದಿಗೆ ಸಾಲ ಪಡೆದಿದ್ದು, ತಿಂಗಳ ಕಂತು ಕಟ್ಟಲಾಗುತ್ತಿಲ್ಲ, ಇದರಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಓಲಾ ಟ್ಯಾಕ್ಸಿ ಒಕ್ಕೂಟದ ಅಧ್ಯಕ್ಷ ತನ್ವೀರ್ ಪಾಶಾ ತಿಳಿಸಿದ್ದಾರೆ.

ಅದಾದ ಒಂದು ಗಂಟೆಯ ಬಳಿಕ ಮತ್ತೊಬ್ಬ ಚಾಲಕ ಶ್ರೀನಿವಾಸ್‌, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡರು. ಬಳಿಕ ಅದೇ ಎಣ್ಣೆಯನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಅವರ ಬಟ್ಟೆಯನ್ನು ಬಿಚ್ಚಿದ ಚಾಲಕರು, ನೀರು ಹಾಕಿ ಮೈ ತೊಳೆದರು. ಸೀಮೆಎಣ್ಣೆ ಕುಡಿದಿದ್ದರಿಂದ ಅಸ್ವಸ್ಥಗೊಂಡ ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮಸ್ಯೆಯನ್ನು ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಮಂಗಳವಾರ ಸಮಸ್ಯೆಯನ್ನು ಇತ್ಯರ್ಥ ಪಡಿಸುವುದಾಗಿ ಓಲಾ ಕಂಪನಿ ಸಿಬ್ಬಂದಿ ತಿಳಿಸಿದ್ದಾರೆ. ಆತ್ಮಹತ್ಯೆ ಯತ್ನ ಸಂಬಂಧ ಚಾಲಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com