ಬೆಂಗಳೂರು: 2017ನೇ ಸಾಲಿನ ಅವರೇ ಮೇಳಕ್ಕೆ ಗುರುವಾರ ಚಾಲನೆ ನೀಡಲಾಗಿದ್ದು, ಅವರೇ ಕಾಳಿನಿಂದ ಮಾಡಿದ ವಿವಿಧ ಬಗೆಯ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನ ಸಜ್ಜನ್ ರಾವ್ ವೃತ್ತದಲ್ಲಿರುವ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಗುರುವಾರದಿಂದ ಇದೇ ಜನವರಿ 15ರವರೆಗೆ ಏರ್ಪಡಿಸಿರುವ ಅವರೇಬೇಳೆ ಮೇಳಕ್ಕೆ ಮೇಯರ್ ಜಿ. ಪದ್ಮಾವತಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ತಾರಾ ಅನುರಾಧ, ವಿಧಾನ ಪರಿಷತ್ ಸದಸ್ಯ ಶರವಣ, ನಟಿಯರಾದ ಪ್ರಿಯಾಂಕ ಉಪೇಂದ್ರ, ರೂಪಿಕಾ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಚಾಲನೆ ನೀಡಿದರು. ಈ ಬಾರಿ ಮೇಳದಲ್ಲಿ ಅವರೇಬೇಳೆಯಿಂದ ತಯಾರಿಸಿದ 100ಕ್ಕೂ ಅಧಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಬೆಲೆ ಕೊಂಚ ಹೆಚ್ಚು ಎಂದು ಹೇಳಲಾಗುತ್ತಿದೆ.
ಇನ್ನು ಅವರೇ ಮೇಳ ಆಯೋಜಿಸಿರುವ ವಾಸವಿ ಕಾಂಡಿಮೆಂಟ್ಸ್ನ ಮಾಲಕಿ ಗೀತಾ ಶಿವಕುಮಾರ್ ಅವರು ಮಾತನಾಡಿ, ಕಳೆದ 16 ವರ್ಷಗಳಿಂದಲೂ ಸತತವಾಗಿ ಅವರೇ ಮೇಳೆವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ಬಾರಿ ನೋಟು ನಿಷೇಧವಾಗಿರುವುದರಿಂದ ಮೇಳದ ವ್ಯಾಪಾರದ ಮೇಲೆ ಪರಿಣಾಮ ಬೀರುವ ಆಂತಕ ಇದೆ. ಆದರೂ ಪ್ರತೀ ವರ್ಷದಂತೆ ಈ ಬಾರಿಯೂ ಮೇಳಕ್ಕೆ ಜನ ಆಗಮಿಸುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಮಾಗಡಿ ತಾಲ್ಲೂಕಿನಿಂದ ಹೆಚ್ಚಾಗೆ ಅವರೇ ಬರುತ್ತಿತ್ತು. ಈ ಬಾರಿ ನಾವ ಚಿಕ್ಕಮಗಳೂರು, ಚಿಂತಾಮಣಿ, ಕೋಲಾರ ಮತ್ತು ತಮಿಳುನಾಡಿನಿಂದಲೂ ಅವರೇ ಬೇಳೆಯನ್ನು ತರಿಸಿದ್ದೇವೆ. ಮಳೆ ಕೊರತೆಯಿಂದಾಗಿ ಈ ಬಾರಿ ಅವರೇಬೇಳೆ ಬೆಳೆ ಕಡಿಮೆಯಾಗಿದ್ದರೂ, ಕೆಲ ರೈತರು ಹನಿ ನೀರಾವರಿಯಿಂದ ಅವರೇ ಬೆಳೆದು ತಂದಿದ್ದಾರೆ ಎಂದು ಅವರು ತಿಳಿಸಿದರು.
ಈ ಬಾರಿ ಮೂರು ಕಡೆ ಅವರೇ ಮೇಳ ಆಯೋಜನೆ
ಈ ಬಾರಿ ನಗರದ ಮೂರು ಪ್ರದೇಶಗಳಲ್ಲಿ ಮೇಳ ಆಯೋಜಿಸಲಾಗಿದ್ದು, ಸಜ್ಜನ್ ರಾವ್ ಸರ್ಕಲ್ ಅಲ್ಲದೆ, ಮಲ್ಲೇಶ್ವರಂ ಹಾಗೂ ನಾಗರಬಾವಿಯಲ್ಲಿ ಅವರೇಬೇಳೆ ಮೇಳ ಏರ್ಪಡಿಸಲಾಗಿದೆ. ಈ ಬಾರಿ ಮಳೆ ಕೊರತೆ ಉಂಟಾಗಿದ್ದರಿಂದ ಅವರೇ ಬೆಳೆಯ ಕೊರತೆಯುಂಟಾಗಿದೆ. ಕಳೆದ ವರ್ಷಕ್ಕೆ ಈ ಬಾರಿ ಶೇ. 25 ರಷ್ಟು ಬೆಲೆ ಏರಿಕೆಯಾಗಿದ್ದು, 150 ರಿಂದ 180 ರು.ಗೆ ಏರಿಕೆಯಾಗಿದೆ ಎಂದು ಗೀತಾ ಅವರು ತಿಳಿಸಿದರು.
Advertisement