ಆದಾಯ ತೆರಿಗೆ ದಾಳಿ: ಕೈ ಮುಖಂಡರ ಮನೆಯಲ್ಲಿ 12.8 ಕೆಜಿ ಚಿನ್ನಾಭರಣ, 162 ಕೋಟಿ ಹಣ ಪತ್ತೆ

ಸಚಿವ ರಮೇಶ್‌ ಜಾರಕಿಹೊಳಿ, ಲಕ್ಷ್ಮೀ ಹೆಬ್ಟಾಳಕರ್‌ ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಬರೋಬ್ಬರಿ 162.06 ಕೋಟಿ ರು. ಅಘೋಷಿತ ನಗದು, ವಿವರಗಳಿಲ್ಲದ 41 ಲಕ್ಷ ರು. ಹಣ ಮತ್ತು 12.8 ಕೆ.ಜಿ.ಚಿನ್ನಾಭರಣಗಳು..
ಆದಾಯ ತೆರಿಗೆ ದಾಳಿ ವೇಳೆ ಸಿಕ್ಕ ಅಪಾರ ಪ್ರಮಾಣದ ನಗದು
ಆದಾಯ ತೆರಿಗೆ ದಾಳಿ ವೇಳೆ ಸಿಕ್ಕ ಅಪಾರ ಪ್ರಮಾಣದ ನಗದು

ಬೆಂಗಳೂರು: ಕರ್ನಾಟಕದ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ್‌ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ  ಬರೋಬ್ಬರಿ 162.06 ಕೋಟಿ ರು. ಅಘೋಷಿತ ನಗದು, ವಿವರಗಳಿಲ್ಲದ 41 ಲಕ್ಷ ರು. ಹಣ ಮತ್ತು 12.8 ಕೆ.ಜಿ.ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಕಳೆದ ಜನವರಿ 19ರಂದು ಗೋವಾ ಮತ್ತು ಕರ್ನಾಟಕ ವಲಯದ ಆದಾಯ ತೆರಿಗೆ ಅಧಿಕಾರಿಗಳು ಸಣ್ಣ ಕೈಗಾರಿಕಾ ಸಚಿವ  ರಮೇಶ್‌ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ  ನಡೆಸಿದ್ದರು. ಅಲ್ಲದೆ, ಅವರ ಆಪ್ತರ ಮನೆಗಳ ಮೇಲೂ ದಾಳಿ ನಡೆಸಿದ್ದರು. ಇದೀಗ ದಾಶಿ ಕುರಿತಂತೆ ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ಬೆಳಗಾವಿ, ಗೋಕಾಕ್‌  ಮತ್ತು ಬೆಂಗಳೂರಿನ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿತ್ತು.

ಉಭಯ ನಾಯಕರು ತಾವು ನಡೆಸುತ್ತಿರುವ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಹಾಗೂ ಆದಾಯ, ಬಂಡವಾಳ ಹೂಡಿಕೆ ಮಾಡಿರುವ ಕುರಿತು ಸರಿಯಾದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಿಲ್ಲ ಎಂಬ ವಿಚಾರ  ತಿಳಿದುಬಂದಿದೆ.  ದಾಳಿ ವೇಳೆ, 162.06 ಕೋಟಿ ರು. ಅಘೋಷಿತ ನಗದು ಪತ್ತೆಯಾಗಿದೆ. ಅಲ್ಲದೆ, 41 ಲಕ್ಷ ರು.ಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ವಿವರ ನೀಡಿಲ್ಲ. ಹೀಗಾಗಿ ಆ ಎಲ್ಲಾ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, 12.8  ಕೆ.ಜಿ.ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದಲ್ಲದೆ ಆಸ್ತಿ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದ ಹಲವು ಮಹತ್ವದ ಕಡತಗಳು ಪತ್ತೆಯಾಗಿದ್ದು, ಅವುಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರತಿಕ್ರಿಯೆಗೆ ಸಿಗದ ನಾಯಕರು
ಇದೇ ವೇಳೆ ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಉಭಯ ನಾಯಕರು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com