ಧ್ವಜಾರೋಹಣ ಮಾಡಿದ ಲಕ್ಷ್ಮಮ್ಮ
ರಾಜ್ಯ
ಕಸ ಗುಡಿಸುವಾಕೆ ಕೈಯಲ್ಲಿ ಧ್ವಜಾರೋಹಣ ಮಾಡಿಸಿ ವಿಶಿಷ್ಟತೆ ಮೆರೆದ ಕುಮಾರಸ್ವಾಮಿ ಲೇಔಟ್ ಪೊಲೀಸರು
68ನೇ ಗಣರಾಜ್ಯೋತ್ಸವ ಸಂಭ್ರಮ ದೇಶಾದ್ಯಂತ ವಿಜೃಂಭಣೆಯಿಂದ ನಡೆದರೆ ಇತ್ತ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಮಾತ್ರ...
ಬೆಂಗಳೂರು: 68ನೇ ಗಣರಾಜ್ಯೋತ್ಸವ ಸಂಭ್ರಮ ದೇಶಾದ್ಯಂತ ವಿಜೃಂಭಣೆಯಿಂದ ನಡೆದರೆ ಇತ್ತ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಮಾತ್ರ ಭಾವನಾತ್ಮಕ ಸಂದರ್ಭಕ್ಕೆ ಸಾಕ್ಷಿಯಾಗಿತ್ತು.
ಸುಮಾರು 23 ವರ್ಷಗಳಿಂದ ಪೊಲೀಸ್ ಆವರಣವನ್ನು ಸ್ವಚ್ಛಗೊಳಿಸುತ್ತಿರುವ 75 ವರ್ಷದ ಲಕ್ಷ್ಮಮ್ಮ ಅವರಿಂದ ಪೊಲೀಸರು ಧ್ವಜಾರೋಹಣ ಮಾಡಿಸಿದ್ದಾರೆ. ಇದರಿಂದ ದಿಗ್ಬಾಂತರಾದ ಲಕ್ಷ್ಮಮ್ಮ ಅವರು ಸ್ವಲ್ಪ ವಿಚಲಿತರಾದರೂ ನಂತರ ಹೆಮ್ಮಿಯಿಂದ ಧ್ವಜಾರೋಹಣ ಮಾಡಿದರು.
ದಿನಂ ಪ್ರತಿ ಬೆಳಗ್ಗೆ 6 ಗಂಟೆಗೆ ಸ್ವಚ್ಛಗೊಳಿಸಲು ಪೊಲೀಸ್ ಠಾಣೆಗೆ ಬರುವ ಲಕ್ಷ್ಮಮ್ಮ ಅವರು ಗಣರಾಜ್ಯೋತ್ಸವ ದಿನವಾದ ನಿನ್ನೆ ಸಹ ಬೆಳಗ್ಗೆ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಠಾಣೆಯ ಮುಖ್ಯ ಅಧಿಕಾರಿ ರವಿ ಪಾಟೀಲ್ ಅವರು ಲಕ್ಷ್ಮಮ್ಮ ಅವರನ್ನು ಕರೆದು ಧ್ವಜಾರೋಹಣ ಮಾಡುವಂತೆ ಸೂಚಿಸಿದರು.
ಇದರಿಂದ ಹರ್ಷಗೊಂಡ ಲಕ್ಷ್ಮಮ್ಮ ನನ್ನು ಕನಸು ಮನಸ್ಸಿನಲ್ಲಿ ನಾನು ಧ್ವಜಾರೋಹಣ ಮಾಡುವೆ ಎಂದು ಭಾವಿಸಿರಲಿಲ್ಲ ಆದರೆ. ಅಧಿಕಾರಿಗಳು ನನ್ನ ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡಿತು. ಇದು ನನ್ನ ಜೀವನ ಇರುವವರೆಗೂ ನೆನಪಿಸಿಕೊಳ್ಳುವುದಾಗಿ ಲಕ್ಷ್ಮಮ್ಮ ಹೇಳಿದ್ದಾರೆ.
ಕುಮಾರಸ್ವಾಮಿ ಲೇಔಟ್ ನಲ್ಲಿ ಪೊಲೀಸ್ ಠಾಣೆ ಆರಂಭಗೊಂಡಾಗಿನಿಂದ ಲಕ್ಷ್ಮಮ್ಮ ಅವರೇ ಠಾಣೆಯ ಆವರನ್ನು ಸ್ವಚ್ಛಗೊಳಿಸುತ್ತಾ ಬಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ