ಬೆಂಗಳೂರು: ಯುವತಿಗೆ ಚಾಕುವಿನಿಂದ ಇರಿದು ಭಗ್ನ ಪ್ರೇಮಿ ಪರಾರಿ

ಭಗ್ನ ಪ್ರೇಮಿಯೊಬ್ಬ ಕಾಲೇಜಿಗೆ ತೆರಳುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬುಧವಾರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಭಗ್ನ ಪ್ರೇಮಿಯೊಬ್ಬ ಕಾಲೇಜಿಗೆ ತೆರಳುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬುಧವಾರ ಬೆಂಗಳೂರಿನಲ್ಲಿ ನಡೆದಿದೆ.
ಯುವಕನಿಂದ ದಾಳಿಗೊಳಗಾದ 20 ವರ್ಷದ ಯುವತಿ ಮಾನಸ ಎಂದು ಗುರುತಿಸಲಾಗಿದ್ದು, ನಗರದ ಖಾಸಗಿ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಳು ಎನ್ನಲಾಗಿದೆ.
ನಿನ್ನೆ ಸಂಜೆ 4.30ರ ಸುಮಾರಿಗೆ ಪಾಪರೆಡ್ಡಿ ಪಾಳ್ಯದ ಆರ್ಚಿಸ್ ಸ್ಕೂಲ್ ಬಳಿ ಈ ಘಟನೆ ನಡೆದಿದ್ದು, ಮಾನಸ ಕಾಲೇಜ್ ನಿಂದ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಭಗ್ನ ಪ್ರೇಮಿ, ತನ್ನನ್ನು ಮಾತ್ರ ಪ್ರೀತಿಸಬೇಕು ಎಂದು ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ನಿರಾಕರಿಸಿದ ಯುವತಿಯ ತೋಳು ಮತ್ತು ಭುಜಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮಾನಸಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.
ಮಾನಸಗೆ ಕಳೆದ ನಾಲ್ಕು ದಿನಗಳಿಂದ ಲ್ಯಾಂಡ್ ಲೈನ್ ನಿಂದ ಫೋನ್ ಮಾಡುತ್ತಿದ್ದ ಯುವಕ, ನನ್ನನ್ನು ಬಿಟ್ಟು ಬೇರೆ ಯಾರನ್ನು ಪ್ರೀತಿಸಬೇಡ ಎಂದು ಎಚ್ಚರಿಸುತ್ತಿದ್ದ. ಆದರೆ ಆತನ ಕರೆಯನ್ನು ಯುವತಿ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯ ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com