ಬೆಂಗಳೂರು: ಇತ್ತೀಚೆಗೆ ಕೊಲೆಗೀಡಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ತಮ್ಮ ಮಗನೆಂದು ಭಾವಿಸಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿರುವ ಸದಾನಂದಗೌಡ ಅವರು, ಮೃತ ಶರತ್ ಮಡಿವಾಳ ಅವರ ತಂದೆಯ ರೋದನ ಮನ ಮಿಡಿಯುವಂತಿದೆ. ಶರತ್ ನನ್ನು ನಿಮ್ಮ ಮಗನೆಂದು ಭಾವಿಸಿ ಆತನ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ಮಾಡಿ. ಆತನ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಎಂದು ಸದಾನಂದಗೌಡ ಮನವಿ ಮಾಡಿದ್ದಾರೆ.
“ಮಾನ್ಯ @CMofKarnataka ನಾನು ನೀವು ಸಮಾನ ದುಃಖಿಗಳೆಂದು ಒಂದು ಸಂಧರ್ಭದಲ್ಲಿ ಹೇಳಿದ್ದೆ . ಮೃತಪಟ್ಟ ಆರೆಸ್ಸೆಸ್ ಕಾರ್ಯಕರ್ತನ ತಂದೆಯ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕ್ಕೊಳ್ಳಿ ಮೃತ ಶರತ್ ಗೆ ನ್ಯಾಯ ದೊರಕಿಸಿ .ಶರತ್ ನ ತಂದೆಯ ಮುಖವನ್ನು ನೆನಸಿಕೊಂಡರೆ ತುಂಬಾ ಸಂಕಟವಾಗುತ್ತಿದೆ . ನಿಮಗೇನೂ ಅನಿಸುತ್ತಿಲ್ಲವಾದರೆ ಅದನ್ನು ಯೋಜಿತ ಕೃತ್ಯವೆಂದು ತಿಳಿಯಲಾ ? ’’ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶರತ್ ರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಶರತ್ ಶವ ಯಾತ್ರೆ ವೇಳೆ ಬಂಟ್ವಾಳದಲ್ಲಿ ವ್ಯಾಪಕ ಹಿಂಸಾಚಾರವಾಗಿತ್ತು.
Advertisement