ಮಾರ್ಚ್ 14ರವರೆಗೂ ಎಟಿಎಂ ದಾಳಿಕೋರ ಪೊಲೀಸರ ವಶಕ್ಕೆ!
ಬೆಂಗಳೂರು: ನಗರದ ಎನ್ ಆರ್ ವೃತ್ತದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಅವರ ಮೇಲೆ ಭೀಕರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಮಧುಕರ್ ರೆಡ್ಡಿ ಅಲಿಯಾಸ್ ಮದನ್ ರೆಡ್ಡಿಯನ್ನು ಬೆಂಗಳೂರು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದ ಕಡಪ ಜೈಲಿನಲ್ಲಿದ್ದ ಆರೋಪಿಯನ್ನು ಮಂಗಳವಾರ ಬಾಡಿ ವಾರಂಟ್ ಆಧಾರದ ಮೇಲೆ ವಶಕ್ಕೆ ಪಡೆದ ಬೆಂಗಳೂರು ಪೊಲೀಸರು ಬಳಿಕ ಆತನನ್ನು 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರಾದ ಎ ರಾಘವೇಂದ್ರ ಅವರು ಮಾರ್ಚ್ 14ರವರೆಗೂ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯ ಉಪಾಯುಕ್ತ ತಮ್ಮಯ್ಯ ಅವರು ಪ್ರಕರಣದ ಮೇಲುಸ್ತುವಾರಿ ನೋಡಕೊಳ್ಳಲ್ಲಿದ್ದು, ಇವರ ನೇತೃತ್ವದಲ್ಲೇ ಸಂತ್ರಸ್ತೆ ಜ್ಯೋತಿ ಉದಯ್ ಅವರು ಆರೋಪಿಯ ಗುರುತು ಪತ್ತೆ ಮಾಡಲಿದ್ದಾರೆ.
ಕಳೆದ ಜನವರಿ 31ರ ರಾತ್ರಿ ಆಂಧ್ರಪ್ರದೇಶದ ನಲ್ಲಪಲ್ಲಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಮಧುಕರ್ ರೆಡ್ಡಿಯನ್ನು ಅಲ್ಲಿಯ ಪೊಲೀಸರು ಬಂಧಿಸಿದ್ದರು. ಆತನೇ ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಅವರ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಎಂಬುದು ಬಳಿಕ ಗೊತ್ತಾಗಿತ್ತು.ಜತೆಗೆ ಆತನ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ವಶಕ್ಕೆ ಪಡೆದ ಪೊಲೀಸರು ಇದೀಗ ಆರೋಪಿಯನ್ನು ಬೆಂಗಳೂರು ಪೊಲೀಸರ ವಶಕ್ಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ