ಬೆಂಗಳೂರು: ಶಾಲಾ ಶುಲ್ಕವನ್ನು ಪಾವತಿಸಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಬಾಲಕನೋರ್ವನನ್ನು ಥಳಿಸಲಾಗಿದೆ ಎಂಬ ಗಂಭೀರ ಆರೋಪ ಪ್ರತಿಷ್ಟಿತ ಶಾಲೆ ವಿರುದ್ಧ ಕೇಳಿಬಂದಿದೆ.
ಬಾಲಕನ ಪೋಷಕರು ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶಾಲಾ ಶುಲ್ಕ ಪಾವತಿ ತಡವಾಗಿದ್ದಕ್ಕೇ ಫೆಬ್ರವರಿ 27ರಂದು ತಮ್ಮ ಪುತ್ರನನ್ನು ಶಾಲಾ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದ ಬಾಲಕ ಮಾನಸಿಕ ಮತ್ತು ದೈಹಿಕವಾಗಿ ಜರ್ಜಿರಿತನಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಅಂತೆಯೇ ಕೇವಲ ತಮ್ಮ ಪುತ್ರ ಮಾತ್ರವಲ್ಲದೇ ಶಾಲೆಯ ಇತರೆ ವಿದ್ಯಾರ್ಥಿಗಳೊಂದಿಗೂ ಸಿಬ್ಬಂದಿ ಇದೇ ರೀತಿ ಕ್ರೂರವಾಗಿ ವರ್ತಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ದೂರಿನಲ್ಲಿ ಬಾಲಕನ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಯಾಗಿದ್ದು, ಈ ಬಗ್ಗೆ ದೂರಿನಲ್ಲಿ ವೈದ್ಯಕೀಯ ವರದಿಗಳನ್ನು ಕೂಡ ಸಲ್ಲಿಸಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಸಂಬಂಧ ಸ್ಪಷ್ಟನೆ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿದೆ. ಇನ್ನು ಪೋಷಕರ ಆರೋಪವನ್ನು ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ನಿರಾಕರಿಸಿದ್ದು, ದೂರಿನ ವಿರುದ್ಧ ತಾವು ಕಾನೂನಾತ್ಮಕವಾಗಿಯೇ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸದ ವಿದ್ಯಾರ್ಥಿಗಳನ್ನು ಥಳಿಸುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದರು.
Advertisement