
ಬೆಂಗಳೂರು: ಕರ್ನಾಟರದ ಹಿತಾಸಕ್ತಿಗಳನ್ನು ಪಕ್ಕಕ್ಕಿಟ್ಟು ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡ ಹೊರಟಿರಕುವ ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಸರ್ಕಾರ ಮತ್ತೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ವರದಿ ಜಾರಿ ವಿರುದ್ಧ ಸತತ ಮೂರನೇ ಬಾರಿಗೆ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಿದೆ.
ಕಸ್ತೂರಿ ರಂಗನ್ ವರದಿಯನ್ನಾಧರಿಸಿ ರಾಜ್ಯದ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಅರಣ್ಯ ವಲಯ ಎಂದು ಘೊಷಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಗೆ ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ವರದಿಯನ್ನು ಮರು ಪರಿಶೀಲಿಸುವಂತೆ ಮನವಿ ಮಾಡಲು ಮುಂದಾಗಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯ ಸರ್ಕಾರ 3 ಬಾರಿ ಆಕ್ಷೇಪಣೆ ಸಲ್ಲಿಸಿದ್ದರೂ, ಕೇಂದ್ರ ಸರ್ಕಾರ ಮಾತ್ರ ಇದನ್ನು ಪರಿಶೀಲಿಸಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕನೇ ಬಾರಿಗೆ ಅಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಅಗತ್ಯಬಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಸಚಿವ ಬಿ.ರಮಾನಾಥ್ ರೈ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅರಣ್ಯ ಸಚಿವ ರಮಾನಾಥ್ ರೈ ಅವರು, "ಗ್ರಾಮವಾರು ನಕ್ಷೆ ಪಡೆದು ಸಚಿವ ಸಂಪುಟ ಉಪ ಸಮಿತಿ ವರದಿ ಸೇರಿಸಿ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ. ಮೂಲ ಕರಡು ಪ್ರತಿಯಲ್ಲಿ 20,668 ಚದರ ಕಿ.ಮೀ ಅರಣ್ಯವನ್ನು ಸೂಕ್ಷ್ಮ ವಲಯಕ್ಕೆ ಸೇರಿಸಲು ನಿರ್ಧರಿಸಲಾಗಿದ್ದು, ರಾಜ್ಯದ ಆಕ್ಷೇಪಣೆಯಲ್ಲಿ 1,571 ಚದರ ಕಿ.ಮೀ ಕೈ ಬಿಡಲು ಕೋರಿದ್ದೇವೆ. ಆದರೆ ಕೇಂದ್ರ ಸರ್ಕಾರ ಯಾವುದೇ ವಿಚಾರವನ್ನು ಪರಿಗಣಿಸಿಲ್ಲ ಎಂದು ರಮಾನಾಥ್ ರೈ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕೇರಳ ರಾಜ್ಯಕ್ಕಾಗದ ಅನ್ಯಾಯ ಕರ್ನಾಟಕಕ್ಕೆ ಮಾತ್ರ ಆಗಿರುವುದಕ್ಕೆ ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇರಳ ಸರ್ಕಾರ ನಮಗಿಂತ ಮೊದಲೇ ಆಕ್ಷೇಪಣೆ ಸಲ್ಲಿಸಿದೆ. ನಾವು ತಡವಾಗಿ ಆಕ್ಷೇಪಣೆ ಸಲ್ಲಿಸಿದ್ದೇವೆ ಎನ್ನುವ ಕಾರಣಕ್ಕೆ ಹೀಗಾಗಿರಬಹುದು ಎಂದು ಸಚಿವರು ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಆ ಭಾಗ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಅಸಾಧ್ಯ. ಪ್ರಮುಖವಾಗಿ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಸಾಧ್ಯವಾಗುವುದಿಲ್ಲ. ಶಾಲೆ, ಆಸ್ಪತ್ರೆ ಮತ್ತು ರಸ್ತೆ ನಿರ್ಮಾಣಕ್ಕೂ ಪರಿಸರ ಇಲಾಖೆಯ ಅನುಮತಿಗಾಗಿ ಕಾದುಕುಳಿತಿರಬೇಕಾಗುತ್ತದೆ. ಈ ವರೆಗೂ ಅಲ್ಲಿನ ರೈತರಿಗೆ ತಮ್ಮ ಭೂಮಿ ಹಕ್ಕು ಪತ್ರ ವಿತರಣೆಯಾಗಿಲ್ಲ ಎಂದು ಸಚಿವರು ಹೇಳಿದರು.
ಕಾಳ್ಗಿಚ್ಚಿನಲ್ಲಿ ಮೈನಿಂಗ್ ಮಾಫಿಯಾ ಕೈವಾಡ!
ಕಾಳ್ಗಿಚ್ಚಿನಿಂದಾಗಿ ಈ ವರೆಗೂ ಸುಮಾರು 100 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. ಬಂಡಿಪುರ, ಕಪ್ಪತಗುಡ್ಡ, ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ ಅರಣ್ಯ ಪ್ರದೇಶದಲ್ಲಿನ ಅರಣ್ಯ ನಾಶವಾಗಿದೆ. ಕಾಳ್ಗಿಚ್ಚಿನ ಹಿಂದೆ ಮೈನಿಂಗ್ ಮಾಫಿಯಾದ ಕೈವಾಡ ಇರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ರಮನಾಥ್ ರೈ ಹೇಳಿದರು.
Advertisement