ಬೆಂಗಳೂರು: ಡ್ರಗ್ಸ್ ಮಾರಾಟದ ಶಂಕೆ ಮೇರೆಗೆ ವಶಕ್ಕೆ ಪಡೆಯಲು ಯತ್ನಿಸಿದ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ ನಿಂದ ಬಿದ್ದುಗಾಯಗೊಂಡಿದ್ದ ನೈಜಿರಿಯಾ ಪ್ರಜೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರ ಬೆಂಗಳೂರಿನ ದೇವನಹಳ್ಳಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ನೈಜೀರಿಯಾ ಪ್ರಜೆಯೊಬ್ಬ ಬೈಕ್ನಿಂದ ಬಿದ್ದು ಗಾಯಗೊಂಡ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲು ಪೊಲೀಸರು ಪ್ರಯತ್ನಿಸಿದರಾದರೂ ಮಾರ್ಗ ಮಧ್ಯೆಯೇ ಆತ ಸಾವನ್ನಪ್ಪಿದ್ದ. ಕೊತ್ತನೂರು-ಆವಲಹಳ್ಳಿ ರಸ್ತೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಬೈಕ್ ನಲ್ಲಿ ಬಂದ ವಿದೇಶಿ ಪ್ರಜೆಗಳಿಬ್ಬರು ಸಿಸಿಬಿ ಪೊಲೀಸರನ್ನು ಕಂಡು ಬೈಕ್ ಅನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಬಳಿಕ ಬೈಕ್ ಸ್ವಲ್ಪ ದೂರದಲ್ಲಿ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ.
ಇದನ್ನು ಕಂಡ ಸಿಸಿಬಿ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಒಬ್ಬಾತ ಪರಾರಿಯಾಗಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡು ಅಲ್ಲೇ ಬಿದ್ದಿದ್ದ. ಗಾಯಾಳುವನ್ನು ಸಿಸಿಬಿ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ಮೃತಪಟ್ಟಿದ್ದ. ಮೃತ ನೈಜೀರಿಯಾ ಪ್ರಜೆಯನ್ನು 35 ವರ್ಷದವನೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement