ರಾಜ್ಯ
ಬೆಂಗಳೂರು: ಶಿವಾನಂದ ವೃತ್ತ ಬಳಿ ಸ್ಟೀಲ್ ಬ್ರಿಡ್ಜ್ ಮುಂದುವರಿಸಲು ಸರ್ಕಾರ ನಿರ್ಧಾರ
ನಗರದ ಶಿವಾನಂದ ಸರ್ಕಲ್ ಹತ್ತಿರ ಹರೇಕೃಷ್ಣ ರಸ್ತೆಯಲ್ಲಿ ಉದ್ದೇಶಿತ ಸ್ಟ್ರೀಲ್ ಬ್ರಿಡ್ಜ್ ಯೋಜನೆಯನ್ನು ಮುಂದುವರಿಸಲು ...
ಬೆಂಗಳೂರು: ನಗರದ ಶಿವಾನಂದ ಸರ್ಕಲ್ ಹತ್ತಿರ ಹರೇಕೃಷ್ಣ ರಸ್ತೆಯಲ್ಲಿ ಉದ್ದೇಶಿತ ಸ್ಟ್ರೀಲ್ ಬ್ರಿಡ್ಜ್ ಯೋಜನೆಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ತಿಂಗಳು 31ರಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸ್ಟೀಲ್ ಬ್ರಿಡ್ಜ್ ವಿರೋಧಿಸಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿ ಆದೇಶವನ್ನು ಹೊರಡಿಸಿದ್ದರು. ಈ ಆದೇಶ ನಿನ್ನೆ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು.
ಜೈನ್ ತಮ್ಮ ಆದೇಶದಲ್ಲಿ, ಬೆಂಗಳೂರು ನಗರಕ್ಕೆ ಹೆಚ್ಚಿನ ಮೂಲಭೂತ ಸೌಕರ್ಯ ಬೇಕಾಗಿದ್ದು ಅದರಲ್ಲೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸ್ಟೀಲ್ ಬ್ರಿಡ್ಜ್ ನ ಅವಶ್ಯಕತೆಯಿದೆ. ಮೆಟ್ರೊ ಮತ್ತು ಬಿಎಂಟಿಸಿಗೆ ಹೆಚ್ಚಿನ ಅನುದಾನ ನೀಡಿ, ಬಸ್ ಮಾರ್ಗಗಳಿಗೆ ಆದ್ಯತೆ ನೀಡಿ, ಪಾದಚಾರಿ ಮಾರ್ಗಗಳ ಸುಧಾರಣೆ, ಸ್ಕೈ ವಾಕ್ ಇತ್ಯಾದಿಗಳಿಗೆ ಅನುದಾನ ನೀಡಲಾಗಿದೆ. ರಸ್ತೆಗಳ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ದಟ್ಟಣೆಯ ರಸ್ತೆಗಳ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು,ಮೇಲ್ಸೇತುವೆ, ರಸ್ತೆ ಅಗಲೀಕರಣ ಇತ್ಯಾದಿ ಯೋಜನೆಗಳಿಗೂ ಅನುದಾನ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಬೆಂಗಳೂರು ನಗರ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವಾಗ ಪ್ರತಿ ಅಭಿವೃದ್ಧಿ ಯೋಜನೆಗಳಿಗೆ ಕೆಲವರು ವಿರೋಧ ವ್ಯಕ್ತಪಡಿಸಿದರೆ ಹಿಂದೆ ಬೀಳುತ್ತದೆ. ಹೀಗಾಗಿ ಸಂಚಾರವನ್ನು ಸರಳಗೊಳಿಸಲು, ವಾಹನ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಅಪಘಾತದ ಅಪಾಯವನ್ನು ಕಡಿಮೆ ಮಾಡಲು ಕೂಡ ಸ್ಟೀಲ್ ಬ್ರಿಡ್ಜ್ ಸಹಾಯವಾಗುತ್ತದೆ ಎಂದು ಜೈನ್ ಸರ್ಕಾರದ ಆದೇಶವನ್ನು ಕೋರ್ಟ್ ಮುಂದಿಟ್ಟಿದ್ದಾರೆ. ಯೋಜನೆ ವಿರೋಧಿಸಿ ಸ್ಥಳೀಯ ನಾಗರಿಕರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಲೇವಾರಿ ಮಾಡಿದ ಕೋರ್ಟ್ ಯೋಜನೆ ಕುರಿತು ಸರ್ಕಾರಕ್ಕೆ ಪ್ರಾತಿನಿಧ್ಯವನ್ನು ಸಲ್ಲಿಸುವಂತೆ ಆದೇಶ ನೀಡಿದೆ.