ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ ಅಧಿವೇಶನ: ಸರ್ಕಾರದಿಂದ ಕೆಪಿಎಂಇ ವಿಧೇಯಕ ಮಂಡನೆ ಅನುಮಾನ?

ವೈದ್ಯರ ಮುಷ್ಕರದೊಂದಿಗೆ ಆರೋಗ್ಯ ಸೇವೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಕೆಪಿಎಂಇ ವಿಧೇಯಕ ಈ ಬಾರಿಯ ಅಧಿವೇಶನದಲ್ಲಿ ಮಂಡನೆಯಾಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.
Published on
ಬೆಳಗಾವಿ: ವೈದ್ಯರ ಮುಷ್ಕರದೊಂದಿಗೆ ಆರೋಗ್ಯ ಸೇವೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಕೆಪಿಎಂಇ ವಿಧೇಯಕ ಈ ಬಾರಿಯ ಅಧಿವೇಶನದಲ್ಲಿ ಮಂಡನೆಯಾಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.
ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಖಾಸಗಿ ವೈದ್ಯರ ಮುಷ್ಕರದಿಂದಾಗಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ವರೆಗೂ ವಿವಿಧ ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಒಟ್ಟು 18 ಮಂದಿ  ಸಾವನ್ನಪ್ಪಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡವಿದ್ದು, ಸರ್ಕಾರ ತನ್ನ ಹಠಮಾರಿ ಧೋರಣೆ ಮುಂದವರೆಸಿದರು ವೈದ್ಯರು ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಅಂತೆಯೇ ಮುಂದಿನ  ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಶಸ್ತ್ರ ಕ್ರಿಯೆಗಳನ್ನು ಮುಂದೂಡಿ, ಖಾಸಗಿ ಲ್ಯಾಬ್‌ಗಳ ಕಾರ್ಯಾಚರಣೆಯನ್ನೂ ಕೂಡ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಪ್ರಸ್ತುತ ಪರಿಸ್ಥಿತಿಯನ್ನು ಶಾಂತಗೊಳಿಸುವ ಸಲುವಾಗಿ ಸರ್ಕಾರ ತಾತ್ಕಾಲಿಕವಾಗಿ ಕೆಪಿಎಂಇ ವಿಧೇಯಕ ಮಂಡನೆಯನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬುಧವಾರ ನಡೆದ ಕಾಂಗ್ರೆಸ್‌  ಶಾಸಕಾಂಗ ಪಕ್ಷ ಸಭೆಯಲ್ಲಿ ವಿಧೇಯಕದ ಬಗ್ಗೆ ಚರ್ಚೆ ನಡೆಸಲು ಬಯಸದ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರ ಜತೆಗೆ ಸಮಾಲೋಚಿಸಿ ಸರ್ಕಾರದ ನಿಲುವು ಅಂತಿಮಗೊಳಿಸಲಾಗುವುದು ಎಂದು  ಹೇಳಿದ್ದಾರೆ. ಹೀಗಾಗಿ ಇದೀಗ ವಿಧೇಯಕದ ಬಗ್ಗೆ ಏನೇ ಕೇಳಿದರೂ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಸಿಎಂ ಕಡೆಗೆ ಕೈ ತೋರಿಸುತ್ತಿದ್ದಾರೆ. ಅಂತೆಯೇ ಸರ್ಕಾರ ಕೂಡ ಪ್ರತಿಭಟನಾ ನಿರತ ವೈದ್ಯರೊಂದಿಗೆ ಮತ್ತೊಂದು ಸುತ್ತಿನ  ಮಾತುಕತೆ ನಡೆಸುವುದಾಗಿ ಹೇಳಿದೆ.
ಹೈಕೋರ್ಟ್ ಅರ್ಜಿ ವಿಚಾರಣೆ
ಇನ್ನು ಖಾಸಗಿ ವೈದ್ಯರ ಮುಷ್ಕರ ಸಂಬಂಧ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದು, ಈ ಅರ್ಜಿಗಳ ವಿಚಾರಣೆ ಕೂಡ ಇಂದು ನಡೆಯಲಿದೆ. ಹೀಗಾಗಿ ಹೈಕೋರ್ಟ್‌ ಮೇಲೆ ಎಲ್ಲರ ಕಣ್ಣು  ನೆಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com