ಜನರ ಸರಣಿ ಸಾವಿನ ಹೊರತಾಗಿಯೂ ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ(ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿದ್ದ ಮುಷ್ಕರದ ವಿರುದ್ಧ ಕರ್ನಾಟಕ ಹೈಕೋರ್ಟ್ ಕೆಂಗಣ್ಣು ಬೀರಿದೆ. ಈ ಸಂಬಂಧ ದಾಖಲಾಗಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರು, ಸರ್ಕಾರದ ಪರ ಹಾಗೂ ಖಾಸಗಿ ವೈದ್ಯರ ಪರ ವಕೀಲರ ವಾದ ಆಲಿಸಿದರು. ಈ ವೇಳೆ ಖಾಸಗಿ ವೈದ್ಯರ ವಕೀಲರು ತಮ್ಮ ವಾದ ಮಂಡಿಸಿ ವೈದ್ಯರು ಮುಷ್ಕರ ವಾಪಸ್ ಪಡೆದಿದ್ದು, ಐಎಂಎ ಅಧ್ಯಕ್ಷರು ಮತ್ತು ಕೆಲವೇ ಪದಾಧಿಕಾರಿಗಳು ಮಾತ್ರ ಮುಷ್ಕರ ಮುಂದುವರೆಸಿದ್ದಾರೆ. ಉಳಿದೆಲ್ಲಾ ವೈದ್ಯರು ಕರ್ತವ್ಯೆ ವಾಪಸ್ ಆಗಿದ್ದಾರೆ ಎಂದು ತಿಳಿಸಿದರು.