ರಾಜ್ಯ
ಬೆಂಗಳೂರು: ಹೊಯ್ಸಳ ಪೊಲೀಸರಿಗೇ ಮಚ್ಚು ಬೀಸಿ ಪರಾರಿಯಾದ ಸುಲಿಗೆಕೋರರು!
ರಾತ್ರಿ ವೇಳೆ ಕ್ಯಾಬ್ ಗಳ ಅಡ್ಡಗಟ್ಟಿ ಚಾಲಕರಿಂದ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆನ್ನುಹತ್ತಿದ ಪೊಲೀಸರಿಗೆ ಸುಲಿಗೆಕೋರರು ಲಾಂಗ್ ಬೀಸಿ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಬೆಂಗಳೂರು: ರಾತ್ರಿ ವೇಳೆ ಕ್ಯಾಬ್ ಗಳ ಅಡ್ಡಗಟ್ಟಿ ಚಾಲಕರಿಂದ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆನ್ನುಹತ್ತಿದ ಪೊಲೀಸರಿಗೆ ಸುಲಿಗೆಕೋರರು ಲಾಂಗ್ ಬೀಸಿ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ನಗರದ ಜಾಲಹಳ್ಳಿಯ ಬಿಇಎಲ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ಡಿಯೋ ಬೈಕ್ ನಲ್ಲಿ ಬಂದಿದ್ದ ನಾಲ್ಲರು ಸಲಿಗೆಕೋರರು ರಸ್ತೆ ಬದಿ ಕ್ಯಾಬ್ ನಿಲ್ಲಸಿ ಮಲಗಿದ್ದ ಇಬ್ಬರು ಚಾಲಕರನ್ನು ಸುಲಿಗೆ ಮಾಡಿದ್ದಾರೆ. ಲಾಂಗ್, ಚಾಕು ತೊರಿಸಿ ಅವರ ಪರ್ಸ್, ಮೊಬೈಲ್, ಹಣವನ್ನು ದೋಚಿದ್ದರು. ಕೂಡಲೇ ಕ್ಯಾಬ್ ಚಾಲಕರು ಜಾಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಅಲ್ಲಿಯೇ ಸಮೀಪದಲ್ಲಿದ್ದ ಹೊಯ್ಸಳ ವಾಹನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಹೊಯ್ಸಳ ಗಾಡಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಸುಲಿಗೆಕೋರರನ್ನು ಹಿಡಿಯಲೆತ್ನಿಸಿದಾಗ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಿಡಿಯಲೆತ್ನಿಸಿದ ಪೊಲೀಸರ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದು, ಈ ವೇಳೆ ಹನುಮಂತ ರಾಜು ಎಂಬ ಹೋಮ್ ಗಾರ್ಡ್ ಗಾಯಗೊಂಡಿದ್ದಾರೆ. ಹೊಯ್ಸಳದಲ್ಲಿದ್ದ ಎಎಸ್ಐ ಮೋಪುರಿ ಎಂಬವರು ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ಹೋಮ್ ಗಾರ್ಡ್ ಹನುಮಂತ ರಾಜು ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು, ಪ್ರಸ್ತುತ ಅವರನ್ನು ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.